ಶನಿವಾರ, ಅಕ್ಟೋಬರ್ 15, 2016

ತಹ ತಹ ….. 31 ಅನುಭಾವಿ ಕವಿ ಕನಕ ಕೀರ್ತನೆಯಲ್ಲಿ ವರ್ತಮಾನದ ತಲ್ಲಣ :

ತಹ ತಹ ….. 31
                                                                             
ಕನ್ನಡದ ದಾಸಪರಂಪರೆಯಲ್ಲಿ ಕನಕದಾಸರು ಆಧ್ಯಾತ್ಮದೊಳಗಿದ್ದೂ ಆಧ್ಯಾತ್ಮವನ್ನು ಮೀರಿದ ದಾರ್ಶನಿಕರೆಂಬುದರಲ್ಲಿ ಅತಿಶಯೋಕ್ತಿ ಇಲ್ಲ. ಕನಕರ ಬರಹಗಳು ಕಾಲಘಟ್ಟವೊಂದಕ್ಕೆ ಸೀಮಿತವಾದೇ ಸಾರ್ವಕಾಲಿಕವಾಗಿವೆ. ಅವರು ಪ್ರಸ್ತುತ ಪಡಿಸುವ ವಿಚಾರಗಳು ಅರ್ಥಲಯ ಹಾಗೂ ನಾದಲಯಗಳೆರಡನ್ನೂ ಒಳಗೊಂಡಿದ್ದರಿಂದ ಕಾಲಾನುಕಾಲಕ್ಕೆ ಪ್ರಸ್ತುತವಾಗಿವೆ. ಕನಕದಾಸರ ಬರಹಗಳಲ್ಲಿನ ವಿಚಾರಗಳ ತಾತ್ವಿಕತೆಗಳನ್ನು ಸಮಕಾಲೀನ ಸಂದರ್ಭದಲ್ಲಿ ಮರುವಾಖ್ಯಾನಕ್ಕೊಳಪಡಿಸುವ ಸ್ತುತ್ಯಾರ್ಹ ಕೈಂಕರ್ಯವನ್ನು ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರವು ಆಯೋಜಿಸುತ್ತಿದೆ. ಅದರ ಭಾಗವಾಗಿ ಸೆಪ್ಟಂಬರ್ 24 ರಿಂದ 25 ರವರೆಗೆ ಎರಡು ದಿನಗಳ ಕಾಲ 'ಕನಕ ಓದು' ಎನ್ನುವ ಕನಕ ಅರಿವು ಕಾರ್ಯಾಗಾರವನ್ನು ಹಮ್ಮಿಕೊಂಡು ಕನಕರ ವಿಚಾರಗಳನ್ನು ಈಗಿನ ತಲೆಮಾರಿನ ಆಸಕ್ತ ಯುವಕರಿಗೆ ವಿಸ್ತರಿಸುವ ಅವಕಾಶವನ್ನು ಮಾಡಿಕೊಡಲಾಗಿತ್ತು.

ಆಧ್ಯಾತ್ಮ ಧರ್ಮ ಭಕ್ತಿ ಮೋಕ್ಷಗಳಂತಹ ಅಲೌಕಿಕ ಆಲೋಚನೆಗಳನ್ನು ಕಾಲದ ಭಕ್ತಿಪಂಥದ ಒತ್ತಡಕ್ಕೊಳಗಾಗಿ ಕನಕರು ತಮ್ಮ ಬರಹಗಳಲ್ಲಿ ಹೇಳಿದಂತೆ ಭಾಸವಾಗುತ್ತದೆ. ಆದರೆ ಅಲೌಕಿಕ ಭಕ್ತಿಭಾವಗಳನು ರೂಪಕವಾಗಿ ಬಳಸಿಕೊಳ್ಳುತ್ತಾ ಲೌಕಿಕದ ಸಮಸ್ಯೆಗಳನ್ನೇ ತಮ್ಮ ಕಾವ್ಯ ಕೀರ್ತನೆಗಳಲ್ಲಿ ಪ್ರಸ್ತುತಪಡಿಸುತ್ತಾರೆ. ಮನುಷ್ಯ ಸ್ವಭಾವದ ನ್ಯೂನ್ಯತೆಗಳು, ಜಾತಿ ಕುಲ ತಾರತಮ್ಯ, ಜನಸಾಮಾನ್ಯರ ಅಸಹಾಯಕತೆ, ಆತ್ಮಾಭಿಮಾನದ ಕುರಿತು ಬರೆಯುವ ಕನಕರ ಬರಹಗಳಲ್ಲಿ  ಜೀವನ ಸಂದೇಶ ಹಾಗೂ ಬದುಕಿನ ದರ್ಶನಗಳನ್ನು ಕಾಣಬಹುದಾಗಿದೆ.

 ಕನಕದಾಸರ ಸುಪ್ರಸಿದ್ದ ಮೋಹನ ತರಂಗಿಣಿ, ನಳಚರಿತ್ರೆ, ಹರಿಭಕ್ತಸಾರ, ರಾಮಧಾನ್ಯ ಚರಿತ್ರೆಗಳಾದಿ ಕಾವ್ಯಗಳು ಪೌರಾಣಿಕ ಕಥಾನಕವನ್ನೇ ಆಧರಿಸಿದ್ದರೂ ವಿಭಿನ್ನ ನಿರೂಪಣೆ... ಸಶಕ್ತ ಬರವಣಿಗೆಗಳಿಂದ ಗಮನ ಸೆಳೆಯುತ್ತವೆಕನಕರ ಹಲವಾರು ಕೀರ್ತನೆಗಳು ಕನ್ನಡಿಗರಿಗೆ ಚಿರಪರಿಚಿತ. ಅವರ ಒಗಟಿನ ರೂಪದ ಮಂಡಿಗೆಗಳನ್ನು ಓದಿ ಅರ್ಥೈಸಿಕೊಳ್ಳುವುದೇ ಬೌದ್ದಿಕವಾಗಿ ಸವಾಲಿನ ಕೆಲಸ. ತಮ್ಮ ಬರಹಗಳ ಮೂಲಕ ಕನಕರು ಬುದ್ದಿಗೆ ಮುಟ್ಟುತ್ತಾರೆ, ಮನಸಿಗೆ ತಟ್ಟುತ್ತಾರೆ, ಹಾಗೂ  ಆತ್ಮ ಚಿಂತನೆಗೆ ಪ್ರೇರೇಪಿಸುತ್ತಾರೆ. 

ದೇಸಿಯತೆ ಹಾಗೂ ಜಾನಪದ ಸೊಗಡಿನಿಂದ ಜನರ ಬಾಯಲ್ಲಿ ಹಾಡಾದ ಕನಕರ ಕೀರ್ತನೆಗಳಲ್ಲಿ ಆಧ್ಯಾತ್ಮಿಕತೆ, ವೈಚಾರಿಕತೆ, ಬದುಕಿನ ಮೌಲ್ಯ, ಬಾಳಿನ ನೀತಿ, ಸಂಸಾರದ ನಶ್ವರತೆ ಹಾಗೂ ಮೂಢನಂಬಿಕೆಗಳ ವಿಡಂಬನೆಗಳು ಕಾವ್ಯರೂಪಕವಾಗಿ ಮೂಡಿಬಂದಿವೆ. ಬಹುತೇಕ ಕೀರ್ತನೆಗಳು ಹಾಗೂ ಕಾವ್ಯಗಳಲ್ಲಿ ಅಭಿವ್ಯಕ್ತಗೊಂಡ ವಿಚಾರಗಳು ಇಂದಿನ ಸಾಮಾಜಿಕ ಆಗುಹೋಗುಗಳಿಗೆ ಹೊಂದಾಣಿಕೆಯಾಗುತ್ತಿದ್ದು  ಸಮಕಾಲೀನವೆನಿಸುವಂತಿವೆ.


ಉದಾಹರಣೆಗೆ ಕನಕಸಂತರ "ವರಕವಿಗಳ ಮುಂದೆ ನರಕವಿಗಳು ವಿದ್ಯೆ ತೋರಬಾರದು' ಎನ್ನುವ ಕೀರ್ತನೆ ನೋಡಬಹುದಾಗಿದೆ. ಕೀರ್ತನೆ ಉತ್ತರ ಕರ್ನಾಟಕದ ಗೀಗಿಪದ  ಜಾನಪದ ಶೈಲಿಯಲ್ಲಿದ್ದು  ಮನುಜ ಬದುಕಲ್ಲಿ ಏನೇನು ಮಾಡಬಾರದು ಎನ್ನುವುದನ್ನು ಹೇಳುತ್ತದೆ. ಬೋಧನೆಯ ಜೊತೆಗೆ ಭಕ್ತಿಯನ್ನೂ ಸೇರಿಸಿ ಜನರನ್ನು ಪರಿವರ್ತನೆಯ ಹಾದಿಯಲ್ಲಿ ಸಾಗುವಂತೆ ಪ್ರೇರೇಪಿಸಲಾಗಿದೆ. 

 "ವರಕವಿಗಳ ಮುಂದೆ ನರಕವಿಗಳ ವಿದ್ಯೆ ತೋರಬಾರದು..
ಧರಣಿಯ ಕಲ್ಲಿಗೆ ಶರಣೆಂದು ಪೂಜೆಯ ಮಾಡಬಾರದು... I I II

ಇದು ಕೀರ್ತನೆಯ ಪಲ್ಲವಿ. ಬಹುಷಃ  ಈಗಿನಂತೆ  ಕನಕರ ಕಾಲಘಟ್ಟದಲ್ಲೂ ಕುಕವಿಗಳ ಹಾವಳಿ ಹೆಚ್ಚಿರಬೇಕು. ಅದಕ್ಕೆ ನರಕವಿಗಳು ಅಂದರೆ ಅಪೂರ್ಣ ಕವಿಗಳು ತಮಗೆ ಗೊತ್ತಿಲ್ಲದ ವಿದ್ಯೆಯನ್ನು ಶ್ರೇಷ್ಟ ಕವಿಗಳ ಮುಂದೆ ತೋರಿಸಲು ಹೋಗಿ ತಮಾಷೆಯ ವಸ್ತುವಾಗಬಾರದು ಎಂದು ಹೇಳಿದ್ದಾರೆ. ಇದರ ಒಳಾರ್ಥ ಇಷ್ಟೇ ಯಾವುದೇ ವಿಷಯದ ಆಳ ಅಗಲ ಅರಿಯದೇ ಅರೆಬೆಂದ ತಿಳಿವನ್ನು ಅರುಹಬಾರದು ಎಂಬುದಾಗಿದೆ. ಇಲ್ಲಿ ವರಕವಿಗಳು ಅಂದರೆ ಪ್ರಜ್ಞಾವಂತರೆಂದೂ ನರಕವಿಗಳೆಂದರೆ ಅಲ್ಪಜ್ಞಾನಿಗಳೆಂತಲೂ ಅರ್ಥೈಸಿಕೊಳ್ಳಬಹುದಾಗಿದೆ. ಈಗಲೂ ಸಹ ಹಾಗೇನೇ... ತುಂಬಿದ ಕೊಡದಂತೆ ಪ್ರಾಜ್ಞರು ಮೌನವಾಗಿದ್ದರೆ, ಅರೆಬರೆ ಜ್ಞಾನವುಳ್ಳವರು ಖಾಲಿ ಕೊಡದಂತೆ ವಿಪರೀತ ಶಬ್ದಮಾಡುತ್ತಿರುತ್ತಾರೆ. ಹಾಗೆಯೇ ಭೂಮಿಯೊಳಗೆ ಹುಟ್ಟಿದ ಕಲ್ಲಿಗೆ ಶರಣಾಗಿ ಪೂಜೆ ಪುನಸ್ಕಾರ ಮಾಡುವುದು ವ್ಯರ್ಥವೆಂದು ಹೇಳುವ ಕನಕರು ಮೂರ್ತಿ ಪೂಜೆಯನ್ನು ವೈಭವೀಕರಿಸುವ ಪುರೋಹಿತಶಾಹಿಗಳ ಪೊಳ್ಳು ಮಾತನ್ನು ನಂಬಿ ಭ್ರಮೆಗೊಳಗಾದ ಭಕ್ತಾದಿಗಳಿಗೆ ಎಚ್ಚರಿಸುತ್ತಾರೆ. ಅಂದರೆ ವೃತಾ ಪಾಂಡಿತ್ಯ ಪ್ರದರ್ಶನ ಮತ್ತು ಮೂರ್ತಿಪೂಜೆ ಎರಡೂ ಅನಗತ್ಯವೆಂದು ಸರಳ ಪದಗಳಲ್ಲಿ ಕನಕದಾಸರು  ವಾಖ್ಯಾನಿಸುತ್ತಾರೆ...

ಪಾಪಿಗಳಿದ್ದಲ್ಲಿ ರೂಪುಳ್ಳ  ವಸ್ತುವ ತೋರಬಾರದು..
ಕೋಪಿಗಳಿದ್ದಲ್ಲಿ  ಅನುಭವಗೋಷ್ಠಿಯ  ಮಾಡಬಾರದು      IIII

ಮೊದಲ ಚರಣದಲ್ಲಿ ಪಾಪಿಗಳು ಹಾಗೂ ಕೋಪಿಗಳ ಬಗ್ಗೆ ಎಚ್ಚರಿಕೆಯಿಂದ ಇರಲು ಕನಕರು ಒತ್ತಾಯಿಸುತ್ತಾರೆ. ಇಲ್ಲಿ ಪಾಪಿಗಳು ಅಂದರೆ ಲೋಭಿಗಳು, ಸ್ವಾರ್ಥಿಗಳು ಎಂದರ್ಥವಾಗುತ್ತಿದ್ದು ಚೆಂದುಳ್ಳ ವಸ್ತುಗಳೆಲ್ಲಾ ತಮಗೇ ಬೇಕೆನ್ನುವ ದುರಾಸೆ ಪೀಡಿತರಿಗೆ ಚೆಂದನೆಯ ರೂಪುಳ್ಳ ಬೆಲೆಬಾಳುವ ವಸ್ತುಗಳನ್ನು ತೋರಿಸಬಾರದು. ಅಂತವನ್ನು ಕಂಡರೆ ಲಪಟಾಯಿಸಲು ಬಯಸುವ ಕಳ್ಳಬುದ್ದಿಯ ಪಾಪಿಗಳು ಸಿದ್ಧರಾಗಿರುತ್ತಾರೆಂಬುದು ಕನಕರ ಆತಂಕ. ಹಾಗೆಯೇ ಕೋಪಿಷ್ಟರ ಮುಂದೆ ಬುದ್ದಿಮಾತು ಹೇಳಿದರೆ ಏನೂ ಪ್ರಯೋಜನವಿಲ್ಲ, ಯಾಕೆಂದರೆ ಸಿಟ್ಟಿನ ಕೈಯಲ್ಲಿ ಬುದ್ದಿಯ ಕೊಟ್ಟು ವಿವೇಚನೆಯನ್ನು ಕಳೆದುಕೊಂಡವರಿಗೆ ವಿವೇಕ ಹೇಳಿದರೆಂತ ಉಪಯೋಗ? ಎನ್ನುವುದು ಕನಕರ ಅನುಭವದ ಮಾತುಗಳು. ಪಾಪಿಗಳಾದವರು ವಸ್ತುಗಳನ್ನು ಲಪಟಾಯಿಸಿದರೆ, ಕೋಪಿಷ್ಟರಾದವರು ವಿವೇಕವನ್ನು ಕಳೆದುಕೊಳ್ಳುತ್ತಾರೆಂಬುದು ಕನಕರ ಅನುಭಾವಿ ನುಡಿಯಾಗಿದೆ. ಇಲ್ಲಿ ಕನಕರು ಪಾಪಿಗಳಿಗೆ ಅಥವಾ ಕೋಪಿಗಳಿಗೆ ಉಪದೇಶ ಹೇಳುವ ಬದಲಾಗಿ ಇಂತ ಜನರಿಂದ ಹುಷಾರಾಗಿರಿ ಎಂದು ಜನರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನವನ್ನು ಕನಕರ ಕೀರ್ತನೆಯ ಸಾಲುಗಳು ಮಾಡುತ್ತವೆ. ಅಂದಿಗಿಂತಲೂ ಇಂದು ಪಾಪಿ ಹಾಗೂ ಕೋಪಿಗಳ ಸಂಖ್ಯೆ ಹೆಚ್ಚಾಗಿರುವುದರಿಂದ ಹಾಗೂ ಇಂತವರು ಎಲ್ಲಾ ಕಾಲದಲ್ಲಿಯೂ ಇರುವುದರಿಂದ ಕನಕರ ಸಾಲುಗಳು ಸಾರ್ವಕಾಲಿಕವಾಗಿವೆ.

"
ಆಡಿ ಸತ್ತ ಮಡಿಕೆಗೆ ಜೋಡಿಸಿಒಲೆಗುಂಡು ಹೂಡಬಾರದು.
.ಬಹುಬಡತನ ಬಂದಾಗ ನೆಂಟರ ಬಾಗಿಲು ಸೇರಬಾರದು"  IIII

ಆಡಿ ಸತ್ತ ಮಡಿಕೆಗೆ ಎನ್ನುವುದೊಂದು ವಿಶಿಷ್ಟ ರೂಪಕ. ಅಂದರೆ ಒಡೆದ, ಹಾಳಾದ, ಬಳಸಿ ಬಿಸಾಕಲ್ಪಟ್ಟು ನಿಷ್ಪ್ರಯೋಜಕವಾದ ಪಾತ್ರೆಗಳು ಅಡುಗೆ ಮಾಡಲು ಯೋಗ್ಯವಲ್ಲ, ಅದಕ್ಕಾಗಿ ಒಲೆಗುಂಡು ಜೋಡಿಸಿದರೂ ಅದು ವ್ಯರ್ಥ ಎನ್ನುವುದು ಶಬ್ದಶಃ ಅರ್ಥವಾಗಿದೆ. ಆದರೆ ಒಳಾರ್ಥ ಬೇರೇನೇ ಇದೆ. ಅಯೋಗ್ಯರಾದವರ ಸಂಗ ಒಳ್ಳೆಯದಲ್ಲ, ನಿಷ್ಪ್ರಯೋಜಕರ ಗೆಳೆತನ ತರವಲ್ಲಅವಿವೇಕಿಗಳ ಜೊತೆ ಸಂಬಂಧ ಉಚಿತವಲ್ಲ... ಎಂಬ ಸತ್ಯವನ್ನು ಸತ್ತ ಮಡಿಕೆಗೆ ಹೋಲಿಸಿ ಬಲು ಸೊಗಸಾಗಿ ವಾಖ್ಯಾನಿಸಿದ್ದಾರೆ. ಹಾಗೆಯೇ ಬಡತನ ಬಂದಾಗ ಸಹಾಯ, ಆಶ್ರಯ ಕೇಳಿ ಸಂಬಂಧಿಕರ ಮನೆಗೆ ಹೋಗುವುದು ತಪ್ಪು. ಹೋದರೂ ಅಲ್ಲಿ ಚಿಕ್ಕಾಸಿನ ಬೆಲೆಯೂ ದೊರೆಯದೇ ಅಪಮಾನಪೀಡಿತರಾಗ ಬೇಕಾಗುತ್ತದೆಂದು ಕನಕರು ಎಚ್ಚರಿಸುತ್ತಾರೆ. ಇಂದಿನ ಜಾಗತೀಕರಣದ ಅರ್ಥವ್ಯವಸ್ಥೆಯಲ್ಲಿ ಹಣವಿಲ್ಲದವನು ಹೆಣಕ್ಕಿಂತ ಕಡೆಯಾಗಿದ್ದಾನೆ. ಹಣ ಸಂಪಾದನೆಯೇ ಬಹುಜನರ ಬದುಕಿನ ಬಹುಮುಖ್ಯ ಉದ್ದೇಶವಾಗಿರುವ ಪ್ರಸ್ತುತ ಸಮಾಜದಲ್ಲಿ  ಬಡವನಿಗೆ ಬೆಲೆಯಿಲ್ಲ ಎಂಬುದು ಸೂರ್ಯಸತ್ಯ. ಅಕಸ್ಮಾತ್ ಬಡತನ ಬಂದರೂ ನೆಂಟರ ಮನೆಗೆ ಹೋಗಬಾರದು, ಹೋದರೆ ಅಲ್ಲಿ ಕಿಂಚಿತ್ತೂ ಗೌರವ ಸಿಗುವುದಿಲ್ಲ ಎನ್ನುವ ವಾಸ್ತವವನ್ನು ಕನಕರು ತೆರೆದಿಡುತ್ತಾರೆ

ಹರಿಯ ನಿಂದಿಸಿ ಹರ ಘನನೆಂದು ನರಕಕ್ಕೆ ಬೀಳಬಾರದು ತಾ
ಪರರನು ಬೈದು ಪಾತಕಕೆ ಮುನ್ನೊಳಗಾಗಬಾರದು  II3II

ತಮ್ಮ ದೇವರು ಹೆಚ್ಚು ಇನ್ನೊಬ್ಬರ ದೇವರು  ಕಡಿಮೆ ಎಂದು ಕಚ್ಚಾಡಿದರೆ ನರಕ ಅಂದರೆ ಸಂಕಷ್ಟ ತಪ್ಪದು. ಮತ್ತೊಬ್ಬರನ್ನು ನಿಂದಿಸಿ ತಮ್ಮ ಅವನತಿಯನ್ನು ತಾವೇ ಹೊಂದಬಾರದು ಎಂದು ಈ ಸಾಲುಗಳಲ್ಲಿ  ಹೇಳುವ ಕನಕರು ಕೋಮುಸೌಹಾರ್ಧತೆ ಹಾಗೂ  ಸಹಜೀವನವನ್ನು ಸರಳ ಶಬ್ದದಲ್ಲಿ ಹೇಳುತ್ತಾರೆ. ಹರನ ಆರಾಧಕರ ಮನೆಯಲ್ಲಿ ಹುಟ್ಟಿ ಹರಿಯನ್ನು ಅಪ್ಪಿಕೊಂಡ ಕನಕರು ಹರಿ ಹರ ಇಬ್ಬರನ್ನೂ ಭಕ್ತಿಯಿಂದ ಭಜಿಸಿದರು.  ಶ್ರೇಷ್ಟ ಕನಿಷ್ಟಗಳ ವ್ಯಸನಗಳನ್ನು ತೊರೆದು  ಸಹಬಾಳ್ವೆ ಮಾಡಬೇಕು ಎನ್ನುವ ನೀತಿಬೋಧನೆಯನ್ನು ಮಾಡಿದ ಕನಕದಾಸರು ಅದರಂತೆಯೇ ತಮ್ಮ ಬದುಕನ್ನೂ ರೂಪಿಸಿಕೊಂಡಿದ್ದರು.

ಮಡದಿ ನುಡಿಯ ಕೇಳಿ ಜಗಳಕೊಬ್ಬರ  ಕೂಡೆ ಹೋಗಬಾರದು
ಬಾಯ್ಬಡಿಕರು ಇದ್ದಲ್ಲಿ ವಸ್ತಿ ಬಿಡಾರವ ಮಾಡಬಾರದು II4II

ಹೆಂಡತಿಯ ಮಾತು  ಕೇಳಿ ಅನ್ಯರ ಜೊತೆ ಜಗಳ ಮಾಡಬಾರದು ಎಂದು ಹೇಳುವ ಕನಕರ ದ್ವನಿಯಲ್ಲಿ ಅದ್ಯಾಕೋ ಹೆಂಡತಿಯ ಬಗ್ಗೆ ಅಸಮಾಧಾನ ಹೊರಹೊಮ್ಮಿದೆ. ಇಲ್ಲಿ ಹೆಂಡತಿ ಎನ್ನುವುದನ್ನು ಇಲ್ಲಿ ಬರೀ ರೂಪಕವಾಗಿ ಪರಿಗಣಿಸಿ ಬೇರೆಯವರ ಮಾತನ್ನು ಕೇಳಿಕೊಂಡು ಪರರ ಜೊತೆಗೆ ಜಗಳಕ್ಕಿಳಿಯಬಾರದು ಎನ್ನುವುದು ಸೂಕ್ತವೆನಿಸುತ್ತದೆ. ಇದರ ಒಳಾರ್ಥ ಇಷ್ಟೇ ವಾಸ್ತವವನ್ನು ಸ್ವತಃ ಅರಿಯದೇ ಯಾವುದೇ ನಿರ್ಧಾರ ತೆಗೆದುಕೊಳ್ಳಬಾರದು ಎನ್ನುವುದಾಗಿದೆ. ಎಲ್ಲಿ ಮಾತಿಗೆ ಬೆಲೆಯಿಲ್ಲವೋ, ಎಲ್ಲಿ ವಿತಂಡವಾದಿಗಳು ಇದ್ದಾರೋ  ಅಲ್ಲಿ ರಾತ್ರಿ ಹೊತ್ತು ಇರಬಾರದು ಇದ್ದರೆ ಅದು ಮೊಂಡುವಾದಕ್ಕೆ, ಜಗಳಕ್ಕೆ ಕಾರಣವಾಗುತ್ತದೆ ಎನ್ನುವುದನ್ನು ಈ  ಮೇಲಿನ ಸಾಲುಗಳಲ್ಲಿ  ಕನಕದಾಸರು ಮಾರ್ಮಿಕವಾಗಿ ಹೇಳುತ್ತಾರೆ. 

ಮುಂದೆ ಭಲಾ ಎಂದು ಹಿಂದೆ ನಿಂದಿಪರನು ಕೂಡಬಾರದು
ನಮ್ಮ ತಂದೆ ಬಾಡದಾದಿಕೇಶವನ ಸ್ಮರಣೆಯ ಬಿಡಬಾರದು II5II

ಮುಂದೊಂದು ಹಿಂದೊಂದು ಮಾತಾಡುವ ಮಹಾ ಅಪಾಯಕಾರಿ ಜನರ ಜೊತೆ ಸೇರಲೇಬಾರದು ಎನ್ನುವ ಎಚ್ಚರಿಕೆಯನ್ನು ಕೊಡುವ ಕನಕರು ಹಿತಶತೃಗಳ ಬಗ್ಗೆ ಜಾಗೃತೆಯಿಂದಿರಲು ಸೂಚಿಸುತ್ತಾರೆ. ಮತ್ತೆ ತಮ್ಮ ಹುಟ್ಟೂರಿನ ದೈವ ಆದಿಕೇಶವನ ಸ್ಮರಣೆಯನ್ನು ಮಾಡುತ್ತಾ ನೆಮ್ಮದಿಯ ಬದುಕನ್ನು ಬಾಳಲು ಪ್ರೇರೇಪಿಸುವ ಕನಕದಾಸರು ಮನುಷ್ಯ ಬದುಕಿನ ನ್ಯೂನ್ಯತೆಗಳು ಹಾಗೂ ಅದಕ್ಕೆ ಪರಿಹಾರೋಪಾಯಗಳನ್ನು ತಮ್ಮ ಕೀರ್ತನೆಯಲ್ಲಿ ಕೊಡುತ್ತಾರೆ. 

 
ಅಂದರೆ ಸಾಮಾನ್ಯ ಜನರು ಅಲ್ಪಜ್ಞಾನಿಗಳಿಂದ, ಡಂಬಾಚಾರಿಗಳಿಂದಪಾಪಿಗಳಿಂದ, ಕೋಪಿಗಳಿಂದ, ಅಪ್ರಯೋಜಕರಿಂದ, ಸಿರಿಗರ ಪೀಡಿತರಿಂದ, ಕೋಮುದ್ವೇಷಿಗಳಿಂದ, ವಿತಂಡವಾದಿಗಳಿಂದ, ನಿಂದಕರಿಂದ  ಸದಾ ದೂರವೇ ಇರಬೇಕು ಎನ್ನುವ ತ್ರಿಕಾಲ ಸತ್ಯವನ್ನು ಕನಕದಾಸರು ಹಾಡಿನ ಮೂಲಕ ತಿಳಿಸಿಕೊಟ್ಟಿದ್ದಾರೆ. ಭಕ್ತಿ ಎನ್ನುವುದು ಈ ಕೀರ್ತನೆಯಲ್ಲಿ ಬರೀ ಒಂದು ರೂಪಕವಾಗಿ ಮೂಡಿಬಂದಿದ್ದು ನೈತಿಕ ಮೌಲ್ಯಗಳನ್ನ ಪ್ರತಿ ಸಾಲಿನಲ್ಲೂ  ಪ್ರತಿಪಾದಿಸಲಾಗಿದೆ. ‘ಭಕ್ತಿಯ ಮಾರ್ಗದಲ್ಲಿ ಸಾಗಿ ನೈತಿಕ ಮೌಲ್ಯಗಳನ್ನು ಅಳವಡಿಸಿಕೊಂಡು  ಪರಿವರ್ತನಾಶೀಲರಾಗಿ ಬದುಕನ್ನು ಸಾರ್ಥಕ ಮಾಡಿಕೊಳ್ಳಬೇಕು’ ಎಂದು ಕನಕರು ಈ ಕೀರ್ತನೆಯಲ್ಲಿ ಸಾರಿ ಸಾರಿ ಹೇಳಿದ್ದಾರೆ. ಕನಕರಿಗೆ ‘ಭಕ್ತಿ ಮಾತ್ರ ಬದುಕಾಗಿರಲಿಲ್ಲ, ಭಕ್ತಿಯನ್ನು ನೆಪಮಾಡಿಕೊಂಡು ಜೀವನದರ್ಶನವನ್ನು ಹೇಳುವುದೇ ಆಶಯವಾಗಿತ್ತು’ ಎನ್ನುವುದು ಈ ಕೀರ್ತನೆಯಿಂದ  ಗೊತ್ತಾಗುತ್ತದೆ. ಈಗಿನಂತೆ ಆಗಿನ ಕಾಲದ ಜನರೂ ಸಹ ಬರೀ ಉಪದೇಶಗಳನ್ನು ಕೇಳಲು ಸಾಧ್ಯವಿರಲಿಲ್ಲವಾದ್ದರಿಂದ  ‘ಹೇಳುವ ಬೋಧನೆಯ ಜೊತೆಗೆ ಒಂದಿಷ್ಟು ದೈವಾರಾಧನೆಯನ್ನು ಬೆರೆಸಿದಾಗ ಜನರನ್ನು ಮುಟ್ಟಲು ಸಾಧ್ಯ’ ಎನ್ನುವುದನ್ನು ತಮ್ಮ ಅನುಭವದಿಂದ ಕಂಡುಕೊಂಡ ಕನಕದಾಸರು ಬದುಕಿನಾದ್ಯಂತ ಭಕ್ತಿಯನ್ನು ಸಮಾಜ ಪರಿವರ್ತನೆಯ ಮಾರ್ಗೋಪಾಯವಾಗಿ ಬಳಸಿದರು. ಹೀಗಾಗಿಯೇ ಅವರ ಕೀರ್ತನೆಗಳ ತತ್ವಾದರ್ಶಗಳು ಐದು ನೂರು ವರ್ಷಗಳ ನಂತರವೂ ಉಳಿದುಕೊಂಡಿವೆ. ಕನಕದಾಸರು ಐದು ಶತಮಾನಗಳ ನಂತರವೂ ತಮ್ಮ ಸಮಾಜಮುಖಿ ನಿಲುವುಗಳಿಂದಾಗಿ ಪ್ರಸ್ತುತವೆನಿಸುತ್ತಾರೆ. ವರ್ತಮಾನದ ತಲ್ಲಣಗಳಿಗೆ ದ್ವನಿಯಾಗಿದ್ದಾರೆ. 

       -ಶಶಿಕಾಂತ ಯಡಹಳ್ಳಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ