ಶುಕ್ರವಾರ, ಅಕ್ಟೋಬರ್ 14, 2016

ತಹ ತಹ .....7 ಡಾ.ಕಲಬುರ್ಗಿ ಹತ್ಯೆ ಮತ್ತು ಪ್ರಜಾ ಟಿವಿ ಚರ್ಚೆ :

ತಹ ತಹ -7


ಇವತ್ತು ಆಗಸ್ಟ್ 30, ಸೃಜನಶೀಲ ಲೇಖಕ ಹಾಗೂ ಸಂಶೋಧಕರಾಗಿದ್ದ ಡಾ.ಎಂ.ಎಂ.ಕಲಬುರ್ಗಿಯವರು ಮತಾಂಧರ ಗುಂಡೇಟಿಗೆ ಬಲಿಯಾಗಿ ಸರಿಯಾಗಿ ಒಂದು ವರ್ಷವಾಯಿತು.  ಧಾರವಾಡದಲ್ಲಿ ಬ್ರಹತ್ ಪ್ರತಿಭಟನಾ ಮೆರವಣಿಗೆಯನ್ನು ಪ್ರಗತಿಪರ ಸಂಘಟನೆಗಳು  ಆಯೋಜಿಸಿ ಯಶಸ್ವಿಗೊಳಿಸಲಾಯಿತು. ಅಲ್ಲಿಗೆ ಹೋಗಬೇಕೆಂದು ಅದೆಷ್ಟೇ ಪ್ರಯತ್ನಿಸಿದರು  ಹೋಗಲು ಆಗಲೇ ಇಲ್ಲ ಎನ್ನುವ ಕೊರಗನ್ನು ಕಡಿಮೆಗೊಳಿಸಿದ್ದು ಪ್ರಜಾ ಟಿವಿ ವಾಹಿನಿಯ ಗೆಳೆಯ ಸೂರ್ಯ ಮುಕುಂದರಾಜ್. ಪ್ರಜಾ ಟಿವಿಯಲ್ಲಿ ನಡೆಯುವ ಕಲಬುರ್ಗಿಯವರ ಹತ್ಯೆ ಕುರಿತ ಪ್ಯಾನಲ್ ಚರ್ಚೆಗೆ ಸೂರ್ಯ ನನ್ನನ್ನು ಆಹ್ವಾನಿಸಿದಾಗ ಮನಸ್ಸು ಒಂಚೂರು ಸಮಾಧಾನಗೊಂಡಿತು. ಮನದಾಳದ ತಹ ತಹಗಳನ್ನು ಹಂಚಿಕೊಳ್ಳಲು ಒಂದು ವೇದಿಕೆ ಸಿಕ್ಕಿತ್ತು. ನನ್ನ ಜೊತೆಗೆ ವಕೀಲರಾದ ಶ್ರೀಧರ್ ಪ್ರಭುರವರು, ನಿವೃತ್ತ ಪೊಲೀಸ್ ಅಧಿಕಾರಿ ಎಸಿಪಿ  ಲೋಕೇಶ್ವರರವರು ಹಾಗೂ ಕನ್ನಡ ಪರಿಚಾರಕರಾದ ಪ್ರಕಾಶ್ ಮೂರ್ತಿಯವರು ಚರ್ಚೆಯಲ್ಲಿ ಭಾಗವಹಿಸಿದ್ದರು. ಜೊತೆಗೆ ಹೊರಗಿನಿಂದಲೇ ಪ್ರಮೋದ್ ಮುತಾಲಿಕ್ ರವರೂ ಕ್ಯಾಮರಾದ ಮುಂದೆ ತಮ್ಮ ವಾದ ಮಂಡಿಸುತ್ತಿದ್ದರು. ಈ ಚರ್ಚೆಯಲ್ಲಿ ನಾನು ಎದರುಸಿದ ಪ್ರಶ್ನೆಗಳು, ಮಂದಿಸಿದ ವಾದಗಳು ಹಾಗೂ ನಡೆದ ಸಂವಾದಗಳ ಕೆಲವು ಅಂಶಗಳನ್ನು ಇಲ್ಲಿ ಹೇಳಲು ಬಯಸುತ್ತೇನೆ.

1. ಡಾ.ಕಲಬುರ್ಗಿಯವರಂತಹ ವಿಚಾರವಾದಿಗಳ ಹತ್ಯೆ ಎನ್ನುವುದು ಮೊದಲನೆಯದ್ದೂ ಅಲ್ಲಾ, ಕೊನೆಯದ್ದೂ ಅಲ್ಲ. ಮನುಕುಲದಲ್ಲಾದ ಉದಾಹರಣೆಗಳನ್ನೇ ತೆಗೆದುಕೊಂಡರೆ ಪುರೋಹಿತಶಾಹಿಯ ಹಿಂಸೆಯನ್ನು ವಿರೋಧಿಸಿದ ಬುದ್ದನನ್ನೇ ಹತ್ಯೆಮಾಡಿ ಬೌದ್ದ ದರ್ಮವನ್ನ ದೇಶಾಂತರಗೊಳಿಸಲಾಯಿತು. ಸನಾತನವಾದಿಗಳನ್ನು ವಿರೋಧಿಸಿ ಎಲ್ಲಾ ಜಾತಿಯ ದುಡಿಯುವ ಜನರನ್ನು ಒಂದುಗೂಡಿಸಿದ ಬಸವಣ್ಣನವರನ್ನು ಸಾಯಿಸಲಾಯಿತು. ಅಸ್ಪೃಶ್ಯರು ಹಾಗೂ ಅಲ್ಪಸಂಖ್ಯಾತರ ಪರವಾಗಿದ್ದರು ಎನ್ನುವ ಕಾರಣಕ್ಕೆ ಮಹಾತ್ಮಾ ಗಾಂಧಿಯವರನ್ನು ಮತಾಂಧರು ಹತ್ಯೆ ಮಾಡಿದರು. ದಲಿತರಿಗೆ ಸಮಾನತೆಯನ್ನು ಕೇಳಿದ ಅಂಬೇಡ್ಕರರಿಗೆ ಕೊಡಬಾರದ ಕಿರುಕುಳ ಕೊಟ್ಟರು. ಮಹಾರಾಷ್ಟ್ರದ ಅಂಧಶ್ರದ್ದಾ ನಿರ್ಮೂಲನ ಸಮಿತಿಯ ಹೋರಾಟಗಾರ ಡಾ.ನರೇಂದ್ರ ದಾಭೋಲ್ಕರರನ್ನು ಬೀದಿಯಲ್ಲಿ ಕೊಂದರು. ಕೊಲ್ಲಾಪುರದ  ಹೋರಾಟಗಾರ ಗೋವಿಂದ್ ಪಾನ್ಸರೆಯವರನ್ನು ಹತ್ಯೆ ಮಾಡಿದರು. ಒಂದು ವರ್ಷದ ಹಿಂದೆ ಡಾ.ಕಲಬುರ್ಗಿಯವರನ್ನು ಅವರ ಮನೆಯಲ್ಲಿಯೇ ಗುಂಡು ಹೊಡೆದರು. ಇದು ವಿಚಾರವಾದಿಗಳ ಮೇಲೆ, ಸತ್ಯ ಪ್ರತಿಪಾದಕರ ಮೇಲೆ ನಡೆದ ನಿರಂತರ ಹತ್ಯಾಕಾಂಡ. ಇದನ್ನು ಸಾಂಸ್ಕೃತಿಕ ಭಯೋತ್ಪಾದನೆ , ಮತಾಂಧ ಭಯೋತ್ಪಾದನೆ ಎಂದು ಕರೆಯಬಹುದಾಗಿದೆ.

2. ವಿಚಾರವಾದವನ್ನು ವಿಚಾರಗಳಿಂದಲೇ ಯಾರಿಗೆ ಸೋಲಿಸಲು ಸಾಧ್ಯವಿಲ್ಲವೋ, ಜನವಿರೋಧಿ ನಿಲುವುಗಳನ್ನು ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲವೋ ಅಂತಾ ಮುಖಹೇಡಿಗಳು ಹಿಂಸೆಯನ್ನು ಅಸ್ತ್ರವನ್ನಾಗಿಸಿಕೊಂಡು ಸತ್ಯ ಹೇಳುವವರ ಹತ್ಯೆ ಮಾಡುವ ಅಮಾನವೀಯ ಕೆಲಸವನ್ನು ಮತಾಂಧ ಪಡೆ ಕಾಲಕಾಲಕ್ಕೆ ಮಾಡಿಕೊಂಡು ಬರುತ್ತಿದೆ. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ದಬ್ಬಾಳಿಕೆ ಮೂಲಕ ಅಂತ್ಯಗೊಳಿಸುವ ಶಡ್ಯಂತ್ರವನ್ನು ಸನಾತನಿಗಳು ತನ್ನದಾಗಿಸಿಕೊಂಡಿದ್ದಾರೆ. ಇದು ಪಕ್ಕಾ ಹೇಡಿತನ. ಡಾ.ಕಲಬುರ್ಗಿಯವರ ವಿಚಾರಗಳ ಬಗ್ಗೆ ಸೈದ್ದಾಂತಿಕ ಭಿನ್ನಾಭಿಪ್ರಾಯಗಳಿದ್ದರೆ ಅದನ್ನು ಚರ್ಚೆ ಸಂವಾದಗಳ ಮೂಲಕ ವಿರೋಧಿಸಬೇಕಾಗಿತ್ತು. ನೇರಾ ನೇರಾ ಚರ್ಚೆಗೆ ಈ ಮನುವಾದಿಗಳು ಎಂದೂ ತಯಾರಿಲ್ಲ. ಶಂಕರಾಚಾರ್ಯರಂತವರೂ ಚರ್ವಾಕರು ಹಾಗೂ ಲೋಕಾಯತರನ್ನು ಅವರ ವೈಚಾರಿಕ ಸಾಹಿತ್ಯದ ಸಮೇತ ಸರ್ವನಾಶಮಾಡಿದರು. ಅವರದೇ ಸಂತಾನದವರು ಈಗ ಅಂತಹುದೇ ಆಕ್ರಮಣಕಾರಿ ದೋರಣೆಯನ್ನು ಮುಂದುವರೆಸಿಕೊಂಡು ಬರುತ್ತಿದ್ದಾರೆ.

3. ಇಂತಹುದನ್ನು ಮಾಡುವವರು ಸ್ವತಃ ಮಾಡದಿದ್ದರೂ ಬೇರೆಯವರಲ್ಲಿ ಮತಾಂಧತೆಯ ಉನ್ಮಾದವನ್ನು ಹುಟ್ಟುಹಾಕಿ ವೈಚಾರಿಕತೆಯನ್ನು ಮಟ್ಟಹಾಕುವಂತೆ ಪ್ರೇರೇಪಿಸುತ್ತಾರೆ. ಅದು ಮನುವಾದಿ ಉನ್ಮಾದವಾಗಿರಬಹುದು, ಕೋಮುವಾದಿ ಉನ್ಮಾದವಾಗಿರಬಹುದು, ಮತಾಂಧತೆಯ ಉನ್ಮಾದವಾಗಿರಬಹುದು… ಈ ಎಲ್ಲಾ ರೀತಿಯ ಉನ್ಮಾದಗಳಿಗೆ ದಲಿತರು, ಅಲ್ಪಸಂಖ್ಯಾತರು ಮಹಿಳೆಯರು ಹಾಗೂ ಸತ್ಯವನ್ನು ಹೇಳಿ ಜನರಲ್ಲಿ ಜಾಗೃತಿ ಮೂಡಿಸುವ ವಿಚಾರವಾದಿಗಳು ಬಲಿಯಾಗುತ್ತಿದ್ದಾರೆ. ವಿರೋಧಿ ದ್ವನಿಯನ್ನು ಅಡಗಿಸಿ ಮನುವಾದವನ್ನು ಬಲವಂತವಾಗಿಯಾದರೂ ಹೇರುವ ಪುರೋಹಿತಶಾಹಿ ಹುನ್ನಾರ ಶತಶತಮಾನಗಳಿಂದ ಅವ್ಯಾಹತವಾಗಿ ನಡೆದುಕೊಂಡು ಬರುತ್ತಿದೆ. ಸನಾತನಿ  ಸಂತಾನಗಳು ಈಗಲೂ ಅದನ್ನೇ ಮುಂದುವರೆಸಿವೆ. ಡಾ.ಕಲಬುರ್ಗಿಯವರ ಹತ್ಯೆಯಾದಾಗ ಪಟಾಗಿ ಸಿಡಿಸಿ ವಿಜ್ರಂಭಿಸಿದ್ದೇ ಈ ಉನ್ಮಾದ ಪೀಡಿತರು. ಸಾಮಾಜಿಕ ಜಾಲ ತಾಣಗಳಲ್ಲಿ ಹತ್ಯೆಯನ್ನು ಸಮರ್ಥಿಸಿಕೊಂಡು ಸಾವಿನಲ್ಲೂ ಸಂಭ್ರಮಿಸಿದ್ದು ಇದೇ ಮತೀಯವಾದಿ ವ್ಯಕ್ತಿ ಹಾಗೂ ಶಕ್ತಿಗಳು.

4. ಹಿಂದೂ ಧರ್ಮವನ್ನು, ಸನಾತನ ಧರ್ಮವನ್ನು ಬೈಯುವುದೇ ಈ ವಿಚಾರವಾದಿಗಳ ಕೆಲಸವಾಗಿದೆ ಎಂದು ಮಾನ್ಯ ಮುತಾಲಿಕರು ಹೇಳುತ್ತಿದ್ದಾರೆ. ದಾಬೋಲ್ಕರ್ ವಿದೇಶಿ ಹಣವನ್ನು ತೆಗೆದುಕೊಳ್ಳುತ್ತಿದ್ದರು ಎಂದೆಲ್ಲಾ ಪ್ರಸ್ತಾಪಿಸುತ್ತಿದ್ದಾರೆ. ಇದು ಚರ್ಚೆಯನ್ನು ದಿಕ್ಕು ತಪ್ಪಿಸುವ ಕೆಲಸವಾಗಿದೆ.  ಈ ಸಂಘಪರಿವಾರಿಗಳಿಗೆ ನೇರವಾಗಿ ಉತ್ತರ ಹೇಳಲು ಸಾಧ್ಯವಾಗದೇ ಇರುವಾಗ ಹೀಗೆ ಬೇರೆ ವಿಷಯಗಳನ್ನು ಅನಗತ್ಯವಾಗಿ ಪ್ರಸ್ತಾಪಿಸಿ ಸಂವಾದದ ದಿಕ್ಕನ್ನೇ ತಪ್ಪಿಸುವ , ವಿಷಯವನ್ನು ಡೈಲ್ಯೂಟ್ ಮಾಡುವ ಕೆಲಸವನ್ನು ಮುತಾಲಿಕನಂತಹ ಮತಾಂಧರು ಮಾಡುತ್ತಾ ಬಂದಿದ್ದಾರೆ. ವಿಚಾರವಾದಿಗಳ ಕೆಲಸ ಬೈಯುವುದಲ್ಲ ಮತಾಂಧರಿಂದ ಆಗುತ್ತಿರುವ ದಬ್ಬಾಳಿಕೆಯನ್ನು ವಿರೋಧಿಸುವುದಾಗಿದೆ.

5.     ಯಾವುದೇ ಕಾಲಘಟ್ಟದಲ್ಲಿ ಸರಕಾರ ಹಾಗೂ ಧರ್ಮಗಳು ಒಂದಕ್ಕೊಂದು ಪೂರಕವಾಗಿರುತ್ತವೆ. ಒಂದನ್ನು ಬಿಟ್ಟು ಇನ್ನೊಂದು ಇರಲು ಸಾಧ್ಯವಿಲ್ಲ. ಬೇರೆ ಬಣ್ಣದ ಪಕ್ಷಗಳಿರಬಹುದು ಆದರೆ ಎಲ್ಲಾ ಆಳುವ ಸರಕಾರಗಳಿಗೆ ನ್ಯಾಯ ಅನ್ಯಾಯಕ್ಕಿಂತಲೂ ಪಕ್ಷದ ಅಸ್ತಿತ್ವ ಮುಖ್ಯ, ಅಧಿಕಾರ ಉಳಿಸಿಕೊಳ್ಳಲು ಓಟ್ ಬ್ಯಾಂಕ್ ಉಳಿಸಿಕೊಳ್ಳುವುದು ಮುಖ್ಯ. ಧರ್ಮ ಎನ್ನುವ ಸ್ಥಾಪಕ ಹಿತಾಸಕ್ತಿಗಳು ಈ ಓಟ್ಗಳನ್ನು ಹಿಡಿದಿಟ್ಟುಕೊಳ್ಳುವ ಬ್ಯಾಂಕ್ ಗಳಾಗಿಯೂ ಕೆಲಸಕ್ಕೆ ಬರುತ್ತವೆ. ಹೀಗಾಗಿ ಒಬ್ಬರ ಹಿತವನ್ನು ಇನ್ನೊಬ್ಬರು ಕಾಪಡಿಕೊಳ್ಳುವ ಒಳ ಒಪ್ಪಂದವನ್ನು ಇವು ಮಾಡಿಕೊಂಡಿರುತ್ತವೆ. ಈ ಕಾಂಗ್ರೆಸ್ ಸರಕಾರ ಮತೀಯವಾದಿಗಳನ್ನು ಮಟ್ಟಹಾಕಬೇಕೆಂದು ಮನಸ್ಸು ಮಾಡಿದರೆ ಸಾಧ್ಯವಾಗುತ್ತದೆ. ಆದರೆ ಮತಾಂಧರ ವಿರುದ್ದದ ಒಂದು ಸಣ್ಣ ನಡೆಯೂ ರಾಜ್ಯಾದ್ಯಂತ ಗಲಭೆಯನ್ನುಂಟು ಮಾಡಿಸುತ್ತದೆ. ಅದಕ್ಕಾಗಿ ಸಂಘಪರಿವಾರದವರು ಸಿದ್ದವಾಗಿದ್ದಾರೆ. ಈ ಕಾಂಗ್ರೆಸ್ ಸರಕಾರ ಈ ಎಲ್ಲಾ ರಿಸ್ಕ್ ಬೇಕಾಗಿಲ್ಲವೆಂದು ಆ ಭಾಗ್ಯ ಈ ಭಾಗ್ಯವೆಂದುಕೊಂಡು ತನ್ನ ಓಟ್ ಬ್ಯಾಂಕನ್ನು ಭದ್ರಮಾಡಿಕೊಂಡು ಕಾಲಕಳೆಯುತ್ತಿದೆ. ಕೇಂದ್ರ ಸರಕಾರ ಸಂಘಪರಿವಾರದ್ದೇ ಆಗಿದ್ದರಿಂದ

6.    ಕಲಬುರ್ಗಿಯವರ ಹತ್ಯೆ ವಿರೋಧಿಸಿದ ಸಮ್ಮೇಳನದಲ್ಲಿ ಕೊಲೆಗಡುಕರಾದ ನಕ್ಸಲ್ ವಾದಿಗಳು ಭಾಗವಹಿಸಿ ಸಪೋರ್ಟ ಮಾಡುತ್ತಾರೆ… ಇದನ್ನು ನೀವು ವಿಚಾರವಾದಿಗಳು ಹೇಗೆ ಸಮರ್ಥಿಸಿಕೊಳ್ಳುತ್ತೀರಿ ಎಂದು ಪ್ರಮೋದ್ ಮುತಾಲಿಕರ ಪ್ರಶ್ನೆಯಾಗಿದೆ. ಮುತಾಲಿಕ ಸಾಹೇಬರೆ ನೀವು ಹೇಳುತ್ತಿರುವ ನೂರ್ ಶ್ರೀಧರ್ ಹಾಗೂ ಸಿರಿಮನೆ ನಾಗರಾಜ್ ನನ್ನ ಸಂಗಾತಿಗಳೇ ಆಗಿದ್ದಾರೆ. ಸಮ್ಮೇಳನದಲ್ಲಿ ಭಾಗವಹಿಸಿ ಸಪೋರ್ಟ್ ಮಾಡಿದ ಇವರು ನಕ್ಸಲ್ ವಾದಿಗಳಲ್ಲ. ಯಾರ ಕೊಲೆಯನ್ನೂ ಮಾಡಿಲ್ಲ. ಆಳುವ ವರ್ಗಗಳ ಶೋಷಣೆಯ ವಿರುದ್ದ ಹೋರಾಡುತ್ತಿರುವ ನಕ್ಸಲ್ ಸಿದ್ದಾಂತದ ಪರವಾಗಿದ್ದವರು. ಯಾವಾಗ ನಕ್ಸಲ್ ಹಿಂಸಾ ಮಾರ್ಗ ಸರಿಯಲ್ಲವೆಂದು ಅವರಿಗೆ ಮನದಟ್ಟಾಯಿತೋ ಆಗ ಅವರು ಸಂಪೂರ್ಣವಾಗಿ ನಕ್ಸಲ್ ಸಂಘಟನೆಯ ಸಂಬಂಧವನ್ನು ಕಡಿದುಕೊಂಡು ತಮ್ಮದೇ ಆದ ಸಂಘಟನೆ ಕಟ್ಟಿಕೊಂಡು ಆಳುವ ವರ್ಗಗಳ ಶೋಷಣೆಯ ವಿರುದ್ದ ಜನರ ಮಧ್ಯದಲ್ಲೇ ಇದ್ದು ಜನಸಂಘಟನೆಯನ್ನು ಮಾಡುತ್ತಿದ್ದಾರೆ. ಚರ್ಚೆಯ ದಿಕ್ಕು ತಪ್ಪಿಸಲು ನೀವು ಮಾಡುತ್ತಿರುವ ಆರೋಪವೇ ನಿರಾಧಾರ.

7.     ದಲಿತರ ರಕ್ಷಣೆಗೆ ಬಂದೂಕು ಕೊಡಬೇಕೆಂದು ಭಗವಾನರವರು ಇಂದು ಹೇಳಿದ್ದು ಹಿಂಸೆಗೆ ಪ್ರಚೋದನೆ ಅಲ್ಲವಾ ಎಂದು ಪ್ರಶ್ನಿಸುತ್ತಿರುವ ಮುತಾಲಿಕರೇ,  ನಮ್ಮ ದಲಿತ ಸಹೋದರರು ಮೇಲ್ವರ್ಗದವರ ಹಾಗೂ ಮನುವಾದಿಗಳ ಸತತ ದಬ್ಬಾಳಿಕೆಯಿಂದ ಮಾನ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ತುಳಿತಕ್ಕೊಳಗಾದವರ ಆತ್ಮರಕ್ಷಣೆಗೆ ಶಸ್ತ್ರಕೊಡಿ ಎಂದು ತುಂಬಾ ಅಸಹಾಯಕತೆಯಿಂದ ಸಾಹಿತಿ ಭಗವಾನರು ಕೇಳುತ್ತಿದ್ದಾರೆ. ತ್ರಿಶೂಲ ದೀಕ್ಷೆ ಕೊಟ್ಟವರೇ ಈ ಸಂಘಪರಿವಾರದವರು. ಸಿಕ್ಕಸಿಕ್ಕಲ್ಲಿ ದಲಿತರ ಮೇಲೆ ಹಲ್ಲೆ ಮಾಡಿ ಹತ್ಯೆ ಮಾಡಿದವರೂ ಇದೇ ಮನುವಾದಿಗಳು. ಗೋರಕ್ಷಣೆಯ ಹೆಸರಲ್ಲಿ ದಲಿತರ ಪ್ರಾಣ ತೆಗೆಯುತ್ತಿದ್ದಾರೆ. ಹಾಗಾದರೆ ದಲಿತ ಸಮುದಾಯದವರು ಏನು ಮಾಡಬೇಕು. ಎಲ್ಲರಿಗೂ ಎಷ್ಟೂಂತ ಸರಕಾರ ರಕ್ಷಣೆ ಕೊಡಲು ಸಾಧ್ಯ. ಮನುಷ್ಯರಿಗೆ ಬೆಂಕಿ ಹಚ್ಚುವ ಮತಾಂಧ ಪಡೆಯೇ ಪಸರಿಸಿದೆ. ಇಂತಹ ಅಸಹನೀಯ ವಾತಾವರಣದಲ್ಲಿ ದಲಿತರು ಎಷ್ಟೂಂತ ದಬ್ಬಾಳಿಕೆಗೆ ಒಳಗಾಗಲು ಸಾಧ್ಯ. ಒಂದು ಮತಾಂಧರನ್ನು ಮೂಲೋತ್ಪಾದನೆ ಮಾಡಬೇಕು, ಇಲ್ಲವೇ ಸರಕಾರವೇ ದಮನಿತರಿಗೆ ರಕ್ಷಣೆ ಕೊಡಬೇಕು. ಇವೆರಡೂ ಆಗದಿದ್ದರೆ ದಲಿತರ ಆತ್ಮರಕ್ಷಣೆಗೆ ಆಯುಧಗಳನ್ನು ಕೊಡಬೇಕು. ಬಂದೂಕುಗಳನ್ನು ಕೊಟ್ಟು ಹಿಂಸೆಯನ್ನು ಪ್ರಚೋದಿಸುವುದು ಸಮರ್ಥನೀಯವಲ್ಲ. ಆದರೆ ಸಂಘಿಗಳ ಹಿಂಸೆ ಹೀಗೆಯೇ ಅಸಹನೀಯವಾದರೆ ತಳಸಮುದಾಯದ ಶೋಷಿತರಿಗೆ ಬೇರೆ ದಾರಿ ಏನಿದೆ? ಆತ್ಮರಕ್ಷಣೆಗೆ ಬಂದೂಕು ಕೊಡಿ ಎಂದು ಕೇಳುವಂತಹ ಅಸಹಾಯಕತೆಗೆ ತಳ್ಳಿದ ಆಳುವ ವರ್ಗಗಳನ್ನು ಮೊದಲು ಪ್ರಶ್ನಿಸಬೇಕಿದೆ. ಇಡೀ ಆಳುವ ವ್ಯವಸ್ಥೆ, ಈ ಅಸಮಾನ ವ್ಯವಸ್ಥೆಯ ಪ್ರತಿಪಾದಕರು, ಕೋಮುವಾದಿ ಮತಾಂಧರು, ಪುರೋಹಿತಶಾಹಿಗಳು ದುಡಿಯುವ ವರ್ಗಗಳ ಮೇಲೆ ದಬ್ಬಾಳಿಕೆ ಮಾಡುತ್ತಲೇ ಬಂದಿವೆ ಇಂತಾ ಸಂದರ್ಭದಲ್ಲಿ ಆತ್ಮರಕ್ಷಣೆಗೆ ಅಸ್ತ್ರ ಕೇಳುವಂತಹ ದುಸ್ತಿತಿಗೆ ದಮನಿತ ವರ್ಗ ಬರುವಂತಹ ಅನಿವಾರ್ಯತೆಯನ್ನು ಈ ವ್ಯವಸ್ಥೆಯೇ ಸೃಷ್ಟಿಸಿದೆ. ಇದು ವರ್ಗ ಸಂಘರ್ಷದ ಸ್ಥಿತ್ಯಂತರದ ಕಾಲಘಟ್ಟ. ಮನುವಾದಿ ಶಕ್ತಿಗಳು ಹಾಗೂ ಮಾನವತಾವಾದಿಗಳ ನಡುವೆ ಕದನ ಆರಂಭಗೊಂಡಿದೆ. ಒಂದು  ಕಡೆ ರಾಜ್ಯಾಧಿಕಾರ ಪಡೆದು ಪ್ಯಾಸಿಸ್ಟ್ ಶಕ್ತಿಗಳು ಬಲಗೊಂಡಿವೆ. ಇನ್ನೊಂದು ಕಡೆ ಶೋಷಿತ ಸಮುದಾಯ ಸಂಘಟಿತವಾಗುತ್ತಿದೆ. ಒಂದಿಲ್ಲೊಂದು ದಿನ ಈ ಸಂಘರ್ಷ ಉಲ್ಬಣಗೊಂಡು ಬದಲಾವಣೆಯ ಕಾಲಘಟ್ಟ ಬಂದೇ ಬರುತ್ತದೆ. ವಿಚಾರವಾದಿಗಳ ಹತ್ಯೆ ಲಕ್ಷಾಂತರ ಜನರಲ್ಲಿ ಜಾಗ್ರತಿಯನ್ನುಂಟುಮಾಡುತ್ತದೆ.

8.     ಈ ಕಾಂಗ್ರೆಸ್ ಸರಕಾರ ಒಂದು ಹೆಜ್ಜೆ ಮುಂದೆ ಹೋದರೆ ಎರಡು ಹೆಜ್ಜೆ ಹಿಂದಿಡುತ್ತದೆ. ಉದಾಹರಣೆಗೆ ಮೌಢ್ಯ ಪ್ರತಿಬಂಧಕ ಕಾಯಿದೆ ತರುತ್ತೇನೆಂದು ಹೇಳುತ್ತಲೇ ಬಂದಿದೆ. ಮೂರು ವರ್ಷವಾದರೂ ಏನೂ ಮಾಡಲಾಗಿಲ್ಲ. ಮತಾಂಧರಿಗೆ ಮೂಗುದಾರ ಹಾಕುವಲ್ಲಿ  ಈ  ಸರಕಾರವೂ ಸಹ ನಿಷ್ಕ್ರೀಯವಾಗಿದೆ. ಈ ಸದ್ಯಕ್ಕೆ ನಮ್ಮ ಮುಂದಿರುವ ಅತೀ  ದೊಡ್ಡ ಅಪಾಯವೆಂದರೆ ಈ  ಕೋಮುವಾದ ಹಾಗೂ ಮತಾಂಧತೆ. ಯುವಜನರಲ್ಲಿ ಹಿಂದುತ್ವದ ಉನ್ಮಾದವನ್ನು ಹುಟ್ಟಿಸಿ ಪ್ರಚೋದಿಸುವುದು ಇನ್ನೂ ಹೆಚ್ಚು ಅಪಾಯಕಾರಿ. ಮುಂದೆ ಇದು ವರ್ಗ ಸಂಘರ್ಷಕ್ಕೆ , ಕೋಮುಸಂಘರ್ಷಕ್ಕೆ, ಜನಸಂಘರ್ಷಕ್ಕೆ ಕಾರಣವಾಗುವುದರಲ್ಲಿ  ಸಂದೇಹವೇ ಇಲ್ಲ. ಪುರೋಹಿತಶಾಹಿ ಎನ್ನುವುದು ಒಂದು ಜಾತಿ, ಒಂದು ಧರ್ಮ, ಒಂದು ಪಕ್ಷಕ್ಕೆ ಸಂಬಂಧಿಪಟ್ಟಿದ್ದಲ್ಲ. ಎಲ್ಲಾ ಕೋಮು, ಜಾತಿ, ರಾಜಕೀಯ ಪಕ್ಷಗಳಲ್ಲೂ ಪುರೋಹಿತಶಾಹಿ ಮನಸ್ಥಿತಿಯವರಿದ್ದಾರೆ. ಮೈಗೆ ಜನಿವಾರ ಹಾಕಿಕೊಂಡವರ ಬಗ್ಗೆ ಎಚ್ಚರದಿಂದಿರಬಹುದು ಆದರೆ ಮನಸಿಗೆ ಜನಿವಾರ ಹಾಕಿಕೊಂಡವರು ಬಹುದೊಡ್ಡ ಅಪಾಯಕಾರಿಗಳು ಎನ್ನುವುದನ್ನು ಮರೆಯಬಾರದು.   

ಹೀಗೆ… ಪ್ರಜಾ ಟಿವಿ ವಾಹಿನಿಯ ಚರ್ಚೆಯಲ್ಲಿ ಭಾಗವಹಿಸಿದ ನಾನು ನನ್ನ ವಾದವನ್ನು ಮಂಡಿಸುತ್ತಾ ಪ್ರಮೋದ್ ಮುತಾಲಿಕರ ವಿತಂಡವಾದಕ್ಕೆ ಪ್ರತಿಕ್ರಿಯೆ ಕೊಡಲು ಪ್ರಯತ್ನಿಸಿದೆ. ನನ್ನ ಜೊತೆಗೆ ಚರ್ಚೆಯಲ್ಲಿ ಭಾಗವಹಿಸಿದ ಗೆಳೆಯರೂ ಸಹ ಹಲವು ಆಯಾಮಗಳಲ್ಲಿ ಕಲಬುರ್ಗಿಯವರ ಹತ್ಯೆಯ ಸುತ್ತ ಸಮರ್ಥವಾಗಿ ತಮ್ಮ ವಾದವನ್ನು ಮಂಡಿಸಿದರು. ಬಹುಷಃ ಮೊದಲ ಬಾರಿಗೆ ಮುತಾಲಿಕ ಎನ್ನುವ ಬಾಯಿಬಡುಕ ಪ್ರಶ್ನೆಗಳಿಗೆ ಉತ್ತರಿಸುವಲ್ಲಿ  ವಿಫಲವಾಗಿ ಚರ್ಚೆಯ ದಿಕ್ಕುತಪ್ಪಿಸಲು ನೋಡಿದರೂ ಉಳಿದವರೆಲ್ಲಾ ಸೇರಿ ಮುತಾಲಿಕರ ಮನುವಾದಿತನಕ್ಕೆ ಪ್ರಭಲ ಪ್ರತಿರೋಧವನ್ನು ವ್ಯಕ್ತಪಡಿಸಿದರು.

-     ಶಶಿಕಾಂತ ಯಡಹಳ್ಳಿ    

  

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ