ಮಂಗಳವಾರ, ಅಕ್ಟೋಬರ್ 25, 2016

ತಹ ತಹ .....53 ನಿಲ್ಲಲಿ ಮತಾಂಧ ರಾಜಕಾರಣ; ಗೆಲ್ಲಲಿ ಮುಸ್ಲಿಂ ಮಹಿಳೆಯರ ಸಬಲೀಕರಣ:

ಧರ್ಮಾಂಧತೆ ಪೊರೆ ಕಳಚಲಿ; ಕೋಮುದ್ವೇಷ ಅಳಿಯಲಿ.




ಮತಾಂಧತೆಯ ಬಗ್ಗೆ ಸಾಧ್ಯವಾದಷ್ಟೂ ಪ್ರತಿಕ್ರಿಯಿಸಬಾರದು ಅಂದಷ್ಟೂ  ಬರೆಯುವಂತೆ ಪ್ರಚೋದಿಸುವ ಕೆಲಸವನ್ನು ಕೋಮುವಾದಿಗಳು ಮಾಡುತ್ತಲೇ ಇರುತ್ತಾರೆ. ಜವಾಬ್ದಾರಿಯುತವಾದ ಸ್ಥಾನದಲ್ಲಿರುವ ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಎನ್ನುವ ಮಹೋದಯ ಹೋದಲ್ಲಿ ಬಂದಲ್ಲಿ ಮತ್ತೆ ಮತ್ತೆ ಮುಸ್ಲಿಂ ವಿರೋಧಿ ಮಾತನ್ನೇ ಪುನರಾವರ್ತಿಸಿದ್ದಾರೆ. "ಸ್ವಾತಂತ್ರ್ಯಾ ನಂತರ ದೇಶದಲ್ಲಿ ಮುಸ್ಲಿಮರ ಸಂಖ್ಯೆ ಶೇ.10 ರಿಂದ ಶೇ. 24 ಕ್ಕೇರಿದೆ. ಶೇ. 90 ರಷ್ಟಿದ್ದ ಹಿಂದೂಗಳ ಸಂಖ್ಯೆ ಶೆ.76 ಕ್ಕೆ ಕುಸಿದಿದೆ" ಎನ್ನುವ ಅನಧೀಕೃತ ಸುಳ್ಳು ಅಂಕಿಸಂಖ್ಯೆಗಳನ್ನು ಕೊಟ್ಟು ಜನರಲ್ಲಿ ಕೋಮುದ್ವೇಷ ಹೆಚ್ಚಿಸುವ ಹೇಳಿಕೆ ಕೊಡುತ್ತಿರುವುದು ಅಕ್ಷಮ್ಯ.

"
ಪರಿಸ್ಥಿತಿ ಹೀಗೆಯೆ ಮುಂದುವರೆದರೆ ದೇಶಕ್ಕೆ ಅಪಾಯ ತಪ್ಪಿದ್ದಲ್ಲ. ಭಾರತ ಕೂಡಾ ಮುಸ್ಲಿಂ ದೇಶವಾಗುತ್ತದೆ. ಆದ್ದರಿಂದ ಹಿಂದೂಗಳು ಹೆಚ್ಚು ಹೆಚ್ಚು ಮಕ್ಕಳನ್ನು ಹೆರುವ ಮೂಲಕ ತಮ್ಮ ಜನಸಂಖ್ಯೆಯನ್ನು ಹೆಚ್ಚಿಸಿಕೊಳ್ಳಬೇಕು" ಎಂದು ಮಾಧ್ಯಮದವರಿಗೆ ಹೇಳಿದ ಈ ಕೇಂದ್ರ ಸಚಿವ ತಮ್ಮ ಮನದೊಳಗಿನ ಮತಾಂಧತೆಯನ್ನು ಮುಕ್ತವಾಗಿಯೇ ಹೊರಹಾಕಿದ್ದಾರೆ. 

ಮೊದಲನೆಯ ಪ್ರಶ್ನೆ. ಶೇ. 76 ಹಿಂದೂಗಳು ಅಂದರೆ ಯಾರು? ದೇಶದ ಜನಸಂಖ್ಯೆಯಲ್ಲಿ ಅರ್ಧದಷ್ಟಿರುವ ಅವರ್ಣೀಯರು ಅಂದರೆ ದಲಿತ ಸಮುದಾಯ ತಮ್ಮನ್ನು ತಾವು ಹಿಂದೂಗಳೆಂದು ಒಪ್ಪುವುದಿಲ್ಲ. ಅಕಸ್ಮಾತ್ ಕೆಲವರು ಒಪ್ಪಿದರೂ ಹಿಂದುತ್ವವಾದಿ ವೈದಿಕಶಾಹಿಗಳು  ದಲಿತರನ್ನು ಮುಟ್ಟಿಸಿಕೊಳ್ಳುವುದಿಲ್ಲ. ಹೀಗಾಗಿ ಅವರ್ಣೀಯರು ವರ್ಣಾಶ್ರಮಿತ ಹಿಂದುತ್ವದ ಭಾಗ ಅಲ್ಲದ್ದರಿಂದ ಅವರನ್ನು ಕಳೆದರೆ ವರ್ಣೀಯರು ಅನ್ನಿಸಿಕೊಂಡವರು ಉಳಿವುದು ಕೇವಲ ಶೇ.36 ಅಷ್ಟೇ. ಇದರಲ್ಲಿ ಶೂದ್ರರನ್ನು ತೆಗೆದರೆ ಉಳಿಯುವ ಸವರ್ಣೀಯರು ಶೇ.20 ದಾಟುವುದಿಲ್ಲ. ಅದರಲ್ಲೂ ಪಕ್ಕಾ ಹಿಂದುತ್ವದ ಪ್ರತಿಪಾದಕರಾದ  ವೈದಿಕಶಾಹಿಗಳು ಹುಡುಕಿದರೂ 5 ರಿಂದಾ 10 ಪರ್ಸಂಟೇಜ್ ಸಿಕ್ಕೋದಿಲ್ಲ. ಹಾಗಾದರೆ ಯಾರೂ ಹಿಂದುತ್ವದ ಉನ್ಮಾದವನ್ನು ಹರಡುತ್ತಿದ್ದಾರೋ ಅವರು ಬೇಕಾದರೆ ಮೊದಲು ಹಿಂದೂ ಸಂತಾನ ಹೆಚ್ಚಿಸುವ ಕೆಲಸ ಶುರು ಮಾಡಿಕೊಳ್ಳಲಿ.

ದೇಶದಲ್ಲಿ ಈಗ ಶೇ.76 ಹಿಂದೂಗಳಿದ್ದರೆ ಶೇ.24 ಮುಸ್ಲಿಂ ಜನರಿದ್ದಾರೆಂದು ಕೇವಲ ಕೇಂದ್ರ ಸಚಿವರು ಮಾತ್ರವಲ್ಲ ಹಲವಾರು ಹಿಂದೂ ಮೂಲಭೂತವಾದಿಗಳೂ ಮುಸ್ಲಿಮೇತರರ ಮನ ಕೆಡಿಸಲು ಹೇಳುತ್ತಲೇ ಇರುತ್ತಾರೆ. ಹಾಗಾದರೆ ಕ್ರಿಶ್ಚಿಯನ್ನರು, ಬೌದ್ದರು, ಜೈನರಾದಿಯಾಗಿ ಇತರ ಧರ್ಮೀಯರು ದೇಶದ ಜನಸಂಖ್ಯೆಯಲ್ಲಿ ಲೆಕ್ಕಕ್ಕಿಲ್ಲವೇ ಅಥವಾ ಅವರನ್ನೂ ಹಿಂದುತ್ವದ ಭಾಗವೆಂದೇ ಪರಿಗಣಿಸುವ ಔದಾರ್ಯತೆಯನ್ನು ತೋರಲಾಗುತ್ತಿದೆಯೋ?

ಪರ್ಸಂಟೇಜ್ ಸುಳ್ಳು ಲೆಕ್ಕಾಚಾರಗಳನ್ನು  ಉದ್ದೇಶ ಪೂರ್ವಕವಾಗಿಯೇ ಹರಡುತ್ತಿದ್ದು ದೇಶವನ್ನು ಧರ್ಮದ ಆಧಾರದಲ್ಲಿ ಒಡೆಯುವ ಅಪಾಯಕಾರಿ ಸಂಚು ನಡೆಯುತ್ತಿದೆ. ಹಿಂದುತ್ವವಾದಿಗಳ ಪ್ರಚೋದನೆಗೊಳಗಾಗಿ ಮುಸ್ಲಿಮೇತರರು ಮಕ್ಕಳನ್ನು ಹುಟ್ಟಿಸುವುದನ್ನು ಹೆಚ್ಚಿಸಿದರೆ ದೇಶದ ಆರ್ಥಿಕತೆ ಅಧೋಗತಿಗಿಳಿಯುತ್ತದೆ. ಕೃಷಿ ಕ್ಷೇತ್ರ ಸಾಯುತ್ತಿದೆ. ನಿರುದ್ಯೋಗ ಹೆಚ್ಚುತ್ತಿದೆ. ಅಭಿವೃದ್ದಿ ಎನ್ನುವುದು ಕೇವಲ ಕಾರ್ಪೋರೆಟ್ ಸರಕು ಸಂಸ್ಕೃತಿಗೆ ಪೂರಕವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಜನಸಂಖ್ಯೆ ಏರತೊಡಗಿದರೆ ದೇಶದಲ್ಲಿ ಆಂತರಿಕ ಸಮಸ್ಯೆಗಳು ಉಲ್ಬಣಗೊಂಡು ಅರಾಜಕತೆ ತೀವ್ರಗೊಳ್ಳುತ್ತದೆ ಎನ್ನುವ ಸಾಮಾನ್ಯ ಪರಿಜ್ಞಾನವೂ ಧರ್ಮಾಂಧರಾದ ಆಳುವವರಿಗೆ ಇಲ್ಲವಾಗಿದೆ.

ಉತ್ತರ ಭಾರತದಲ್ಲಿ ಚುನಾವಣೆಗಳು ಶುರುವಾಗುತ್ತಿರುವುದರಿಂದ ಹಿಂದುತ್ವದ ಹೆಸರಲ್ಲಿ ಜನರನ್ನು ಎತ್ತಿಕಟ್ಟುವ ನಿಟ್ಟಿನಲ್ಲಿ ಮತರಾಜಕೀಯ ಮಾಡಲು  ಮುಸ್ಲಿಂ ವ್ಯಯಕ್ತಿಕ ಕಾನೂನೂಗಳ ಮೇಲೆ ಸಂಘಿಗಳ ಕಣ್ಣು ಬಿದ್ದಿದೆ. ತಲಾಕ್ ಹಾಗೂ ಬಹುಪತ್ನಿತ್ವಗಳನ್ನು ತೆಗೆದುಹಾಕಿ ಏಕರೂಪ ನಾಗರೀಕ ಸಂಹಿತೆಯನ್ನು ಮುಸ್ಲಿಂ ಮಹಿಳೆಯರ ಸಮಾನ ಹಕ್ಕಿನ ಹೆಸರಲ್ಲಿ ತರಲು ಕೇಂದ್ರ ಸರಕಾರ ಪ್ರಯತ್ನಿಸುತ್ತಿದೆ. ಹಿಂದೂ  ಕಾನೂನಿನಲ್ಲಿ  ಮಹಿಳೆಯರ ಸಮಾನತೆ ಹಾಗೂ ಸ್ವಾತಂತ್ರ್ಯಕ್ಕೆ ಬೇಕಾದಷ್ಟು ಕಾನೂನುಗಳಿವೆಯಲ್ಲಾ.. ಹಾಗಂತ ಇಲ್ಲಿ ಮಹಿಳೆಯರಿಗೆಲ್ಲಾ ಸಮಾನತೆ ಸಿಕ್ಕಿದೆಯಾ? ಲಿಂಗಸಮಾನತೆ ಜಾರಿಯಲ್ಲಿದೆಯಾಕೇವಲ ಕಾನೂನುಗಳನ್ನು ಮಾಡುವುದರಿಂದ ಪಿತೃಪ್ರಧಾನ ವ್ಯವಸ್ಥೆಯಲ್ಲಿ ಸಂಪೂರ್ಣ ಲಿಂಗಸಮಾನತೆ ತರಲು ಸಾಧ್ಯವಿಲ್ಲ. ಅದೇ ರೀತಿ ಇಸ್ಲಾಮ್ ವೈಯಕ್ತಿಕ ವೈವಾಹಿಕ ಸಂಹಿತೆಯನ್ನು ತೆಗೆದು ಹಾಕಿ ಏಕರೂಪ ನಾಗರೀಕ ಸಂಹಿತೆ ಜಾರಿಮಾಡಿದರೂ ಮಹಿಳೆಯರಿಗೆ ಸಮಾನತೆ ದೊರಕಿಸಿಕೊಡುವುದು ಹಾಲೀ ಪಿತೃಪ್ರಧಾನ ಧಾರ್ಮಿಕ ವ್ಯವಸ್ಥೆಯಲ್ಲಿ ಅಸಾಧ್ಯ.
. 
ಆದರೆ ಉಗ್ರ ಹಿಂದಿತ್ವವಾದಿಗಳ ಅಸಲಿ ತಕರಾರಿರುವುದು ತಲಾಕ್ ಕುರಿತು ಅಲ್ಲ. ಮುಸ್ಲಿಂ ಮಹಿಳಾ ಪರ ಕಾಳಜಿ ಅಂತೂ ಅಲ್ಲವೇ ಅಲ್ಲ. 'ಮುಸ್ಲಿಮ್ ಸಮುದಾಯದ ಮೇಲೆ ಹಿಂದೂಗಳನ್ನು ಎತ್ತಿಕಟ್ಟಿ ಧರ್ಮಾಂಧತೆಯ ಉನ್ಮಾದ ಹುಟ್ಟು ಹಾಕುವುದು ಹಾಗೂ ಇಸ್ಲಾಮಿಗರಲ್ಲಿರುವ ಬಹುಪತ್ನಿತ್ವವನ್ನು ತೆಗೆದು ಹಾಕಿ ಅವರ ಜನಸಂಖ್ಯೆಯನ್ನು ನಿಯಂತ್ರಿಸುವುದುಸಂಘ ಪರಿವಾರದ ಹಿಡನ್ ಅಜೆಂಡಾ ಆಗಿದೆ. ಇದಕ್ಕಾಗಿಯೆ ಮಹಿಳಾ ಹಕ್ಕುಗಳಿಗಾಗಿ ಏಕರೂಪ ನಾಗರೀಕ ಸಂಹಿತೆ.... ಎನ್ನುವ ವಾದವನ್ನು ಹುಟ್ಟಿಸಲಾಗುತ್ತಿದೆ.

ದೇಶವಿರಲಿ ಇಲ್ಲವೇ ಧರ್ಮವಿರಲಿ ಬದಲಾವಣೆಯ ಒತ್ತಡಗಳು ಒಳಗಿಂದ ಬರಬೇಕೆ ಹೊರತು ಹೊರಗಿಂದ ಹೇರಲಾಗದು. ಕೇಂದ್ರ ಸರಕಾರಕ್ಕೆ ನಿಜವಾಗಿಯೂ ಮುಸ್ಲಿಂ ಮಹಿಳಾಪರ ಕಾಳಜಿ ಇದ್ದಲ್ಲಿ ಅವರಿಗೆ ಹೆಚ್ಚಿನ ಶಿಕ್ಷಣವನ್ನು ಉಚಿತವಾಗಿ ಒದಗಿಸಲಿ. ಉನ್ನತ ಶಿಕ್ಷಣದಲ್ಲಿ  ಮೀಸಲಾತಿ ಕೊಡಲಿ. ಇಸ್ಲಾಂ ಮಹಿಳೆಯರು ಸ್ವಂತ ಉದ್ಯೋಗ ಮಾಡಿ ಆರ್ಥಿಕವಾಗಿ ಸಭಲಗೊಳ್ಳುವಂತೆ ಸಶಕ್ತ ಯೋಜನೆಗಳನ್ನು ರೂಪಿಸಲಿ. ಸರಕಾರಿ ಹಾಗೂ ಖಾಸಗಿ ವಲಯದ ಉದ್ಯೋಗಗಳಲ್ಲಿ ಮೀಸಲಾತಿ ಒದಗಿಸಲಿ. ಯಾವಾಗ ಸಮುದಾಯದ ಮಹಿಳೆಯರಿಗೆ ವಿದ್ಯೆ ಮತ್ತು ಉದ್ಯೋಗಗಳು ದೊರೆತು ಸಮಾನತೆಯ ಅರಿವು ಹಾಗೂ ಆರ್ಥಿಕ ಸ್ವಾತಂತ್ರ್ಯ ದೊರೆಯುತ್ತದೋ ಆಗ ಅದೇ ಸುಶಿಕ್ಷಿತ ಮಹಿಳೆಯರು ತಮಗೆ ಕಂಟಕವಾಗಿರುವ ತಲ್ಲಾಕನ್ನು ಕಡೆಗಣಿಸಿ ಸ್ವಾವಲಂಬಿಯಾಗಿ ಬದುಕಲು ಕಲಿಯುತ್ತಾರೆ. ವಿವಾಹಿತನನ್ನೇ ಮತ್ತೆ ವಿವಾಹವಾಗುವುದನ್ನು ನಿರಾಕರಿಸುತ್ತಾರೆ. ಆಗ ಆರ್ಥಿಕ ಭದ್ರತೆ ಇರುವ ಮಹಿಳೆಗೆ ತಲ್ಲಾಕ್ ಕೊಡಲು ಪುರುಷರು ಹಿಂದೇಟು ಹಾಕುತ್ತಾರೆ. ಆಗಲೂ ಮುಸ್ಲಿಂ ಮೂಲಭೂತವಾದಿಗಳು ಮಹಿಳೆಯರನ್ನು ಧರ್ಮದ ಹೆಸರಿನಲ್ಲಿ ದಮನಿಸಲು ಪ್ರಯತ್ನಿಸಿದರೆ ಮಹಿಳೆಯರೇ ಸಿಡಿದೇಳುತ್ತಾರೆ. ತಮಗೆ ಮಾರಕವಾಗಿರುವ ಹಾಗೂ ವ್ಯಾಪಕವಾಗಿ ದುರ್ಬಳಿಕೆಯಾಗುತ್ತಿರುವ ಮುಸ್ಲಿಂ ವೈಯಕ್ತಿಕ ವೈವಾಹಿಕ ಕಾನೂನುಗಳನ್ನು ಅವರೇ ಧಿಕ್ಕರಿಸುತ್ತಾರೆ. ಹಾಗೂ ಸಂಪಾದನೆಯ ಹೊಣೆಗಾರಿಕೆ ಹೊತ್ತ ಮಹಿಳೆ  ಹೆಚ್ಚು ಮಕ್ಕಳನ್ನು ಹೆರಲು ನಿರಾಕರಿಸುತ್ತಾಳೆ. ಮುಸ್ಲಿಂ ಮಹಿಳೆಯರ ಬಗ್ಗೆ ಮೊಸಳೆ ಕಣ್ಣೀರು ಸುರಿಸುವ ಬದಲು... ಮೊದಲು ಮಹಿಳೆಯರನ್ನು ಶೈಕ್ಷಣಿಕವಾಗಿ, ಆರ್ಥಿಕವಾಗಿ ಸಬಲರನ್ನಾಗಿಸುವ ಕೆಲಸವನ್ನು ಕೇಂದ್ರ ಸರಕಾರ ಮಾಡಬೇಕಿದೆ. ಅದು ದೇಶದ ಎಲ್ಲಾ ಸಮುದಾಯಗಳನ್ನೂ ಪ್ರತಿನಿಧಿಸುವ ಕೇಂದ್ರ ಸರಕಾರದ ಹೊಣೆಗಾರಿಕೆಯೂ ಆಗಿದೆ. 
 
ಸುಶಿಕ್ಷಿತ ಮಹಿಳೆ ಅದು ಹೇಗೆ ಧರ್ಮಾಂಧತೆಯನ್ನು ಧಿಕ್ಕರಿಸುತ್ತಾಳೆ ಎನ್ನುವುದಕ್ಕೆ ಮುಂಬೈ ಹಾಜಿ ಅಲಿ ದರ್ಗಾದೊಳಗೆ ಮಹಿಳಾ ಪ್ರವೇಶವೇ ಸಾಕ್ಷಿಯಾಗಿದೆ. ದರ್ಗಾದಲ್ಲಿ ಮೊದಲಿನಿಂದಲೂ ಮಹಿಳೆಯರ ಪ್ರವೇಶವನ್ನು ನಿಷೇಧಿಸಲಾಗಿತ್ತು. ಆದರೆ ಮುಸ್ಲಿಂ ಸಮುದಾಯದ ಸುಶಿಕ್ಷಿತ ಪ್ರಜ್ಞಾವಂತ ಮಹಿಳೆಯರ ಹುಟ್ಟುಹಾಕಿದ  “ಭಾರತೀಯ ಮುಸ್ಲಿಂ ಮಹಿಳಾ ಆಂದೋಲನ" ಸಂಘಟನೆಯು ದರ್ಗಾದ ಆಡಳಿತ ಮಂಡಳಿ ವಿರುದ್ದ ತೀವ್ರವಾಗಿ ಪ್ರತಿಭಟಿಸಿತು. ಆದರೂ ಮೂಲಭೂತವಾದಿಗಳು ಸಮಾನಾವಕಾಶ ನಿರಾಕರಿಸಿದ್ದರಿಂದ  2012 ರಲ್ಲಿ  ನ್ಯಾಯಾಲಯದ ಮೆಟ್ಟಿಲೇರಿ ಕಾನೂನು ಹೋರಾಟ ಮುಂದುವರೆಸಿದರು. "ದರ್ಗಾಕ್ಕೆ ಮಹಿಳೆಯರ ಪ್ರವೇಶ ನಿಷೇಧಿಸಿದ್ದು ಸಂವಿಧಾನದ 14, 15 ಹಾಗೂ 25 ಉಲ್ಲಂಘನೆಯಾಗಿದೆ, ಪುರುಷರಂತೆ ಮಹಿಳೆಯರಿಗೂ ಒಳಗೆ ಪ್ರವೇಶಿಸಲು ಅವಕಾಶ ನೀಡಬೇಕು" ಎಂದು ಬಾಂಬೆ ಹೈಕೋರ್ಟಲ್ಲಿ ಆಗ್ರಹಿಸಲಾಯ್ತು. ಲಿಂಗತಾರತಮ್ಯ ಸಾಧುವಲ್ಲವೆಂದು ಹೇಳಿದ ಹೈಕೊರ್ಟ್ ಮಹಿಳೆಯರು ದರ್ಗಾ ಪ್ರವೇಶದ ಪರವಾಗಿ ಆಗಸ್ಟ್ 26 ರಂದು ತೀರ್ಪು ನೀಡಿತುದರ್ಗಾ ಆಡಳಿತ ಮಂಡಳಿ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಸುಪ್ರಿಂ ಕೋರ್ಟಿಗೆ ಹೋದರೂ .24 ರಂದು" ದರ್ಗಾ ಪ್ರವೇಶಿಸಲು ಮಹಿಳೆಯರಿಗೂ ಸಮಾನ ಹಕ್ಕಿದೆ" ಎಂದು ಚಾರಿತ್ರಿಕ ತೀರ್ಪು ನೀಡಿತು. ಅನಿವಾರ್ಯವಾಗಿ ದರ್ಗಾ ಆಡಳಿತ ಮಂಡಳಿ ತೀರ್ಪಿಗೆ ಬದ್ದವಾಗಿರುವುದಾಗಿ ತೀರ್ಮಾನಿಸಿ ಮಹಿಳೆಯರಿಗೆ ದರ್ಗಾದಲ್ಲಿ ಪ್ರವೇಶವನ್ನು ಮುಕ್ತಗೊಳಿಸಲೇಬೇಕಾಯಿತು. ಸುಪ್ರೀಂ ಕೋರ್ಟಿನ ಈ ತೀರ್ಪಿನಿಂದಾಗಿ ಇನ್ನು ಮೇಲೆ ದೇಶದ ಎಲ್ಲಾ ದರ್ಗಾಗಳಲ್ಲೂ ಮಹಿಳೆಯರ ಪ್ರವೇಶ ಅಬಾಧಿತವಾಗುತ್ತದೆ. ಮಹಿಳೆಯರ ಆಗ್ರಹಕ್ಕೆ ತಕ್ಕಂತೆ ಮುಸ್ಲಿಂ ಧರ್ಮಾಧಿಕಾರಿಗಳೂ ಸಹ ತಮ್ಮ ಧಾರ್ಮಿಕ ಕಟ್ಟುಪಾಡುಗಳನ್ನು ಸಡಿಲಗೊಳಿಸಿ ಕಾಲಕ್ಕೆ ತಕ್ಕಂತೆ ಬದಲಾಗುವ ಅನಿವಾರ್ಯತೆಗೊಳಗಾಗ ಬೇಕಾಗುತ್ತದೆ.


ನಿಜವಾಗಿ ಈಗ ಆಗಬೇಕಾದದ್ದೂ ಇದೆ. ಮಹಿಳೆಯರಿಗೆ ದರ್ಗಾ ಪ್ರವೇಶಕ್ಕೆ ಒತ್ತಾಯಿಸಿ ಕೇಂದ್ರ ಸರಕಾರವಾಗಲೀ , ಇಲ್ಲವೇ ಸಂಘ ಪರಿವಾರವಾರದ ಯಾವುದೇ ಅಂಗವಾಗಲೀ ಒತ್ತಾಯಿಸಿ ಹೋರಾಟ ಹಾರಾಟ ಮಾಡಿದ್ದರೆ ದರ್ಗಾ ಸಮಸ್ಯೆ ಕೋಮುಸಂಘರ್ಷಕ್ಕೆ ತಿರುಗುತ್ತಿತ್ತು. ಆದರೆ ಯಾವಾಗ ಮುಸ್ಲಿಂ ಸಮುದಾಯದ ಪ್ರಜ್ಞಾವಂತ ಮಹಿಳೆಯರು ಎಚ್ಚೆತ್ತು ತಮ್ಮ ಹಕ್ಕುಗಳಿಗಾಗಿ ಹೋರಾಡಿದರೋ ಆಗ ಕೋಮುದ್ವೇಷ ಇಲ್ಲದೇ ಸಾಂವಿಧಾನಿಕವಾಗಿಯೇ ನ್ಯಾಯ ದೊರೆಯಿತು. ಹೀಗೆ ಇಸ್ಲಾಂ ಸಮುದಾಯದ ಮಹಿಳೆಯರನ್ನು ಹೆಚ್ಚೆಚ್ಚು ವಿಧ್ಯೆ ಹಾಗೂ ಉದ್ಯೋಗಗಳ ಮೂಲಕ ಸಬಲೀಕರಣಗೊಳಿಸಿ ಆರ್ಥಿಕ ಬಲವನ್ನು ತುಂಬಿ ಅರಿವಿನ ಬೀಜ ಬಿತ್ತಿದರೆ ಸಾಕು ಅವರೇ ತಮ್ಮನ್ನು ದಮನಿಸುವ ಕಟ್ಟುಪಾಡುಗಳ ವಿರುದ್ದ ಹೋರಾಡುತ್ತಾರೆ. ಕೇವಲ ದರ್ಗಾಗಳಲ್ಲಿ ಮಾತ್ರವಲ್ಲ ಮಸೀದಿಗಳಲ್ಲೂ ಪ್ರವೇಶ ಪಡೆಯಲು ಸಾಂವಿಧಾನಿಕ ಹೋರಾಟದ ಮಾರ್ಗ ಹಿಡಿಯುತ್ತಾರೆ. ತಲ್ಲಾಕ್ ಹಾಗೂ ಬಹುಪತ್ನಿತ್ವದ ವಿರುದ್ದ ಸಂಘಟಿತರಾಗಿ ಪ್ರತಿಭಟಿಸುತ್ತಾರೆ. ಆದ್ದರಿಂದ ಕೇಂದ್ರ ಸರಕಾರ ಹಾಗೂ ಅದರ ಮಾತೃ ಸಂಸ್ಥೆಯಾದ ಆರೆಸ್ಸೆಸ್ ಗಳು ಕೋಮುದ್ವೇಷ ರಾಜಕಾರಣವನ್ನು ಬಿಟ್ಟು ಮುಸ್ಲಿಂ ಮಹಿಳಾ ಸಬಲೀಕರಣಕ್ಕೆ ಮುಂದಾಗಲಿ. ಅದಕ್ಕಿಂತಾ ಮೊದಲು ಇವರು ಪ್ರತಿಪಾದಿಸುತ್ತಿರುವ ಹಿಂದುತ್ವ ವ್ಯವಸ್ಥೆಯಲ್ಲಿರುವ ಲಿಂಗತಾರತಮ್ಯವನ್ನು ಹೋಗಲಾಡಿಸಿ ಅನ್ಯ ಧರ್ಮೀಯರಿಗೆ ಮಾದರಿಯಾಗಲಿ. ಇಲ್ಲವಾದರೆ ನಮ್ಮ ತಟ್ಟೆಯಲ್ಲೇ ಹೆಗ್ಗಣ ಬಿದ್ದಿರುವಾಗ ಮತ್ತೊಬ್ಬರ ತಟ್ಟೆಯೊಳಗಿನ ಜಿರಲೆ ಕಂಡು ಬಾಯಿಬಡಿದು ಕೊಂಡಂತಾಗುವುದರಲ್ಲಿ ಸಂದೇಹವಿಲ್ಲ.  ಏಕರೂಪ ನಾಗರೀಕ ಸಂಹಿತೆಯನ್ನು ಬಲವಂತವಾಗಿ ಹೇರುವುದರಿಂದ ಮುಸ್ಲಿಂ ಮಹಿಳೆಯರಿಗೆ ಯಾವುದೇ ಪ್ರಯೋಜನವೂ ಇಲ್ಲ. ಇಸ್ಲಾಂ ಮಹಿಳೆಯರು ಜಾಗ್ರತರಾಗಿ ಮೂಲಭೂತವಾದಿಗಳ ವಿರುದ್ದ ತಿರುಗಿಬಿದ್ದು ತಮ್ಮ ಹಕ್ಕಿಗಾಗಿ ಹೋರಾಡುವವರೆಗೂ ಲಿಂಗತಾರತಮ್ಯ ಕೊನೆಯಾಗುವುದಿಲ್ಲ.

ಈ ಹಿಂದುತ್ವವಾದಿಗಳು ತಪ್ಪಾಗಿ ಪ್ರಚಾರಮಾಡುವ ಹಾಗೆ ಇಸ್ಲಾಂ ಧರ್ಮೀಯರೆಲ್ಲಾ ಮಹಿಳಾ ವಿರೋಧಿಗಳೂ ಅಲ್ಲಾ, ಧರ್ಮಾಂಧರೂ ಅಲ್ಲಾ. ಹಿಂದೂಗಳಲ್ಲೂ ಹಲವರು ಅದು ಹೇಗೆ ತಮ್ಮ ಧರ್ಮ ದೇವರುಗಳ ಮೇಲೆ ನಂಬಿಕೆ ಇಟ್ಟುಕೊಂಡೇ ಮಾನವೀಯತೆಗೆ ತುಡಿಯತ್ತಾರೋ ಹಾಗೆಯೇ ಇಸ್ಲಾಂ ಧರ್ಮದಲ್ಲೂ ಸಹ ಬಹುತೇಕರು ತಮ್ಮ ಧಾರ್ಮಿಕ ನಂಬಿಕೆಗಳನ್ನು ಇಟ್ಟುಕೊಂಡೇ ಮಾನವೀಯತೆಯನ್ನು ಉಳಿಸಿಕೊಂಡಿದ್ದಾರೆ. ಅದೆಷ್ಟೋ ಜನ ಮುಸ್ಲಿಂಮರು  ಇಸ್ಲಾಂ ಭಯೋತ್ಪಾದನೆಯನ್ನು ಖಂಡಿಸುತ್ತಾರೆ. ಧರ್ಮದ ಹೆಸರಿನಲ್ಲಿ ನಡೆಯುವ ಹಿಂಸೆಯನ್ನು ವಿರೋಧಿಸುತ್ತಾರೆ. ತಮ್ಮ ಧರ್ಮದ ಚೌಕಟ್ಟಿನಲ್ಲಿ   ಮಹಿಳೆಯರ ಬಗ್ಗೆ  ಒಲವು ಹಾಗೂ ಗೌರವವನ್ನೂ ಹೊಂದಿದವರಿದ್ದಾರೆ. ಹಲವಾರು ಎಡಪಂಥೀಯ ಪ್ರಗತಿಪರ ಸಂಘಟನೆಗಳಲ್ಲಿ ಕೆಲವಾರು ಯುವಕರು  ತಮ್ಮನ್ನು ಗುರುತಿಸಿಕೊಂಡಿದ್ದಾರೆ. ಮುಸ್ಲಿಂ ಸಮುದಾಯದಲ್ಲೂ ಸಹ ಪ್ರಗತಿಪರ ಆಲೋಚನೆಯುಳ್ಳ ಸಮಾನಾಸಕ್ತರ ಸಂಘಟನೆಗಳೂ ಇವೆ. ಆದರೆ.. ಹಿಂದೂ ಧರ್ಮೀಯರಲ್ಲಿದ್ದಂತೆ  ಇಸ್ಲಾಂನಲ್ಲಿಯೂ ಸಹ ಮತಾಂಧರಿದ್ದಾರೆ, ಮೂಲಭೂತವಾದಿಗಳಿದ್ದಾರೆ, ಮಹಿಳಾ ಪೀಡಕರೂ ಇದ್ದಾರೆ. ಆದರೆ.. ಈ ಮತಾಂಧತೆ, ಅಮಾನವೀಯತೆ ಹಾಗೂ ಮಹಿಳಾ ದಮನಗಳು ಕೇವಲ ಒಂದು ಧರ್ಮ, ಜಾತಿಗೆ ಸಂಬಂಧಿಸಿದ್ದಂತೂ ಅಲ್ಲವೇ ಅಲ್ಲಾ. ಜಗತ್ತಿನ ಎಲ್ಲಾ ಕೋಮು, ಧರ್ಮ, ಮತ, ಪಂಗಡ, ಭಾಷೆ, ದೇಶಗಳಲ್ಲೂ ವ್ಯಾಪಕವಾಗಿವೆ. ಹಾಗಂತಾ ಇಡೀ ಧರ್ಮವೇ ಕೆಟ್ಟದ್ದಾಗಿದೆ, ಒಂದೀಡೀ ಸಮುದಾಯವೇ ಮನುಕುಲದ ವಿರೋಧಿಯಾಗಿದೆ ಎಂದೆಲ್ಲಾ ಆರೋಪಿಸುವುದೇ ಮನೋರೋಗ ಪೀಡಿತರ ಲಕ್ಷಣವಾಗಿದೆ. ಮುಸ್ಲಿಂ ಸಮುದಾಯದೊಳಗಿನ ಪ್ರಗತಿಪರ ಯುವಕರು ಸಂಘಟಿತರಾಗಿ  ತಮ್ಮ ಧರ್ಮದೊಳಗೆ ನಡೆಯುತ್ತಿರುವ ಅಮಾನವೀಯತೆಯ ವಿರುದ್ಧ ಸಿಡಿದೇಳಬೇಕಿದೆ. ಮಹಿಳೆಯರನ್ನು ಹೆಚ್ಚೆಚ್ಚು ಸುಶೀಕ್ಷಿತರನ್ನಾಗಿಸಿ ಅವರಲ್ಲಿ ಆರ್ಥಿಕ ಸ್ವಾವಲಂಬನೆಯನ್ನು ತರುವ ನಿಟ್ಟಿನಲ್ಲಿ ಪ್ರಯತ್ನಿಸಬೇಕಿದೆ. ಸರಕಾರೀ ಸವಲತ್ತುಗಳನ್ನು ಮಹಿಳೆಯರು ಬಳಸಿಕೊಂಡು ಆರ್ಥಿಕ ಸ್ವಾತಂತ್ರವನ್ನು ಗಳಿಸಲು ಸಹಕರಿಸಬೇಕಿದೆ. ಶರಿಯತ್ ಕಾನೂನಿನ ದುರುಪಯೋಗವನ್ನು ಯಾರೇ ಮಾಡಲಿ  ಅವರ ವಿರುದ್ಧ ಸಂಘಟಿತ ಪ್ರತಿಭಟನೆಯನ್ನು ಕೈಗೊಂಡು ನೊಂದ ಮಹಿಳೆಯರಿಗೆ ನ್ಯಾಯ ಕೊಡಿಸಲು ಹೋರಾಡಬೇಕಿದೆ. 

ಯಾವಾಗ ಮುಸ್ಲಿಂ ಪ್ರಗತಿಪರರು ಮಹಿಳಾ ಸಬಲೀಕರಣದತ್ತ ಗಮನ ಹರಿಸುತ್ತಾರೋ, ಯಾವಾಗ ಇಸ್ಲಾಂ ಮಹಿಳೆಯರು ತಮ್ಮ ಮೇಲೆ ದಬ್ಬಾಳಿಕೆಯಾದಾಗ ಸಿಡಿದೇಳುತ್ತಾರೋ ಆಗ ಮತಾಂಧ ಶಕ್ತಿಗಳು ಹೆದರಿ ಬದಲಾವಣೆಯಾಗುತ್ತಾರೆ. ಯುವಜನಾಂಗ ಹಾಗೂ ಮಹಿಳೆಯರು ತಿರುಗಿ ಬಿದ್ದರೆ ಯಾರೂ ಯಾವ ಧರ್ಮವನ್ನೂ ದುರುಪಯೋಗ ಪಡಿಸಿಕೊಳ್ಳಲು ಸಾಧ್ಯವಿಲ್ಲ. ಅನ್ಯಾಯದ ವಿರುದ್ಧ ಪ್ರತಿಭಟಿಸಿ ನೊಂದವರಿಗೆ ನ್ಯಾಯ ಕೊಡಿಸುವುದೇ ಎಲ್ಲಾ ಧರ್ಮಗಳ ಉದ್ದೇಶವಾಗಿದೆ. ಕರುಣೆ, ದಯೆ, ಸಹಬಾಳ್ವೆ ಹಾಗೂ ಸಹೋದರತ್ವವವೇ ಎಲ್ಲಾ ಧರ್ಮಗಳ ಮೂಲ ತತ್ವವಾಗಿದೆ. ಆದರೆ ಮನುಷ್ಯರು ತಮ್ಮ ಸ್ವಾರ್ಥಕ್ಕಾಗಿ ಧರ್ಮವನ್ನು ದಾರಿತಪ್ಪಿಸುತ್ತಾ ತಾವೂ ದಿಕ್ಕುತಪ್ಪುತ್ತಾರೆ. ಯಾರು ಏನೇ ಹೇಳಲಿ ಇಸ್ಲಾಂ ಧರ್ಮ ಕರುಣೆಯನ್ನೇ ಬೋದಿಸುತ್ತದೆ. ಸಾಂತಿ ಸೌಹಾರ್ಧತೆಯನ್ನೇ ಬಯಸುತ್ತದೆ. ಕುರಾನಿನ ಮಾನವೀಯ ಆಶಯಗಳನ್ನು ಪ್ರಚಾರಗೊಳಿಸುವ ಹಾಗೂ ಧರ್ಮಾಧರ ಅಮಾನವೀಯ ಆಚರಣೆಗಳನ್ನು ಪ್ರತಿಭಟಿಸುವ ಕೆಲಸವನ್ನು ಶಾಂತಿ ಸೌಹಾರ್ಧತೆಯನ್ನು ಬಯಸುವ  ಪ್ರಗತಿಪರ ಮನೋಭಾವದ ಇಸ್ಲಾಂ ಧರ್ಮೀಯರು ಮಾಡಬೇಕಿದೆ. ಹಿಂದೂ ಧರ್ಮೀಯರು ಹೇಗೆ ತಮ್ಮ ಧರ್ಮದೊಳಗಿನ ಅನ್ಯಾಯ, ಅಸಮಾನತೆಗಳನ್ನು ಕಾಲಕಾಲಕ್ಕೆ ವಿರೋಧಿಸುತ್ತಾ ಬಂದಿದ್ದಾರೋ ಹಾಗೆಯೇ ಇಸ್ಲಾಂ ಧರ್ಮೀಯರೂ ಸಹ ತಮ್ಮ ಧರ್ಮಾಚರಣೆಯೊಳಗಿರುವ ಅಮಾನವೀಯತೆಯ ವಿರುದ್ದ ಕಾಲಕಾಲಕ್ಕೆ ಪ್ರತಿರೋಧವನ್ನು ಒಡ್ಡಲೇ ಬೇಕಿದೆ. ಹೀಗೆ ಮಾಡದಿದ್ದರೆ ಅನ್ಯ ಧರ್ಮೀಯ ಮತಾಂಧರು  ಇಸ್ಲಾಂ ಧರ್ಮಾಂಧರ ನ್ಯೂನ್ಯತೆಗಳನ್ನೇ ದೊಡ್ಡದು ಮಾಡಿ ಕೋಮುದ್ವೇಷ ಬಿತ್ತುವ ಮೂಲಕ ಸಂಘರ್ಷವನ್ನು ಹುಟ್ಟುಹಾಕಿ  ಧರ್ಮೋನ್ಮಾದವನ್ನು ಸೃಷ್ಟಿಸುತ್ತಾರೆ. ಏನೇ ಆಗಲಿ.. ಎಲ್ಲಾ ಧರ್ಮದೊಳಗಿನ ದ್ವೇಷದ ಬೀಜಗಳು ನಾಶವಾಗಲಿ... ಮಾನವೀಯತೆ ಎನ್ನುವುದು ಎಲ್ಲಾ ಧರ್ಮಾನುಯಾಯಿಗಳ ಆಶಯವಾಗಲಿ.     


             - ಶಶಿಕಾಂತ ಯಡಹಳ್ಳಿ

2 ಕಾಮೆಂಟ್‌ಗಳು: